![](https://kannadadunia.com/wp-content/uploads/2024/02/WhatsApp-Image-2024-02-05-at-5.06.45-AM.jpeg)
ಬೆಂಗಳೂರು : ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ. 2 ರಷ್ಟು ಮೀಸಲಾತಿಯನ್ನುಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ ಶಿಪ್ ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕ್ರೀಡಾಪಟುಗಳು ರಾಜ್ಯ ಪೊಲೀಸ್ ಇಲಾಖೆಯ ಸೇವೆಗಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ. 2 ರಷ್ಟು ಮೀಸಲಾತಿಯನ್ನುಒದಗಿಸಲು ನಿರ್ಧರಿಸಿದ್ದು, ಭವಿಷ್ಯದಲ್ಲಿ ಈ ಮೀಸಲಾತಿಯನ್ನು ಹೆಚ್ಚಿಸುವಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯು, ಅಖಿಲ ಭಾರತ ಪೊಲೀಸ್ ಕ್ರೀಡಾ ಕಂಟ್ರೋಲ್ ಬೋರ್ಡ್ ಸಹಯೋಗದೊಂದಿಗೆ ರಾಜ್ಯ ಪೊಲೀಸ್ ದಳ ಹಾಗೂ ಕೇಂದ್ರ ಪಾರಾ ಮಿಲಟರಿ ದಳದವರು ಭಾಗವಹಿಸುವ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ ಶಿಪ್ನ್ನು ಜನವರಿ 30 ರಿಂದ ಫೆಬ್ರವರಿ 4ರವರೆಗೆ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಥಮ ಬಾರಿಗೆ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ಷಿಪ್ ನ್ನು ಆಯೋಜಿಸಿದ್ದು ಪ್ರಥಮ ಬಾರಿಗೆ ಕರ್ನಾಟಕ ಪೊಲೀಸ್ ತಂಡವಾಗೊ ಆರ್ಚರಿಯಲ್ಲಿ ಭಾಗವಹಿಸಿದೆ ಎಂದು ಹೇಳಿದರು.
ಯೋಜನಾಬದ್ಧ ಸಿದ್ದತೆ ಹಾಗೂ ಪರಿಶ್ರಮದಿಂದ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿರುವ ಪೊಲೀಸ್ ಮಹಾನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ.ಅಲೋಕ್ ಮೋಹನ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಲಿಚ್ಛಿಸುತ್ತೇನೆ ಎಂದರು.
ವಿವಿಧ ಶ್ರೇಣಿಯ ಮಹಿಳಾ ಆರ್ಚರ್ಸ್ ಸೇರಿದಂತೆ ಒಟ್ಟು 436 ಆರ್ಚರ್ಗಳು , ರೀಕರ್ವ್ , ಕಾಂಪೌಂಡ್ ಮತ್ತು ಇಂಡಿಯನ್ ರೌಂಡ್ ಎಂಬ 3 ವರ್ಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 174 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಅಲ್ಲದೇ ಮೊದಲ ಮೂರು ಮಹಿಳಾ ಹಾಗೂ ಪುರುಷ ತಂಡಗಳು ಟ್ರೋಫಿಯನ್ನು ಗೆದ್ದಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಕ್ರೀಡಾ ಕ್ಷೇತ್ರವನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದೆ. 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ಷಿಪ್ 2023-24ಗಾಗಿ ಸರ್ಕಾರ 25 ಲಕ್ಷ ರೂ.ಗಳ ಅನುದಾನವನ್ನು ಒದಗಿಸಿದೆ ಎಂದು ಹೇಳಿದ್ದಾರೆ.
2022-23ನೇ ಸಾಲಿನಲ್ಲಿ, 80 ಸಿವಿಲ್ ಪೇದೆಗಳು ಹಾಗೂ 20 ಪಿಎಸ್ ಐಗಳನ್ನು ಕ್ರೀಡೆ ಕೋಟಾದಡಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಬಿಲ್ಲು ವಿದ್ಯೆ, ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಈ ವಿದ್ಯೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ್ದ ಏಕಲವ್ಯ, ಅರ್ಜುನ, ಕರ್ಣ, ದ್ರೋಣಾಚಾರ್ಯರ ಕೊಡುಗೆಯನ್ನು ಮರೆಯುವಂತಿಲ್ಲ. ಒಬ್ಬ ಉತ್ತಮ ಬಿಲ್ಲುಗಾರನಿಗೆ ಸದೃಢ ಮಾನಸಿಕ ಶಿಸ್ತು, ಉತ್ತಮ ತಂತ್ರಗಾರಿಕೆ, ಗುರಿ, ಸದೃಢ ಸ್ನಾಯುಗಳು ಹಾಗೂ ಪರಿಶ್ರಮದ ಅಗತ್ಯವಿರುತ್ತದೆ ಎಂದರು.
ಭಾರತದಲ್ಲಿ ಆರ್ಚರಿ ಮಾನ್ಯತೆ ಹಾಗೂ ಗೌರವ ಪಡೆದ ಕ್ರೀಡೆಯಾಗಿದ್ದು, ಒಲಂಪಿಕ್ ಗೇಮ್ಸ್ ಸೇರಿದಂತೆ ಇತರೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆರ್ಚರ್ ಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಆರ್ಚರ್ ಗಳು ವಿವಿಧ ಒಲಂಪಿಕ್ ಆವೃತ್ತಿಗಳಲ್ಲಿ ಭಾಗವಹಿಸಿದ್ದು, ತಮ್ಮ ಕೌಶಲ್ಯ ವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ. ಪ್ರಮುಖ ಆರ್ಚರ್ ಗಳಾದ ಲಿಂಬಾ ರಾಮ್ , ಸತೀಶ್ ಕುಮಾರ್ ಮತ್ತು ದೀಪಿಕಾ ಕುಮಾರಿ ಒಲಂಪಿಕ್ ನಲ್ಲಿ ದೇಶದ ಬಾವುಟವನ್ನು ಹೊತ್ತು ನಡೆದಿದ್ದಾರೆ ಎಂದು ಹೇಳಿದ್ದಾರೆ.