
ಮೈಸೂರು: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾನೆಯಾಗಿದೆ. ಬಾಲರಾಮನ ಮೂರ್ತಿ ತಯಾರಿಸಿರುವ ಕೃಷ್ಣಶಿಲೆಗೆ ರಾಜ್ಯ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 80,000 ರೂಪಾಯಿ ದಂಡ ವಿಧಿಸಿದ್ದಾರೆ.
ದಂಡದ ಹಣವನ್ನು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಪಾವತಿಸಿದ್ದು ದಂಡದ ಮೊತ್ತ 80,000 ರೂಪಾಯಿ ಹಣವನ್ನು ಬಿಜೆಪಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದಲ್ಲಿ ಮಾಲೀಕ ರಾಮದಾಸ ಅವರು ಭೂಮಿ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು. ಜಮೀನಿನಲ್ಲಿ ಕೃಷ್ಣಶಿಲೆಗಳು ಲಭ್ಯವಾಗಿದ್ದವು. ಈ ವಿಷಯ ತಿಳಿದ ಹಲವರು ಮೂರ್ತಿ ತಯಾರಿಕೆಗೆ ಕೃಷ್ಣ ಶಿಲೆ ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ವಿಗ್ರಹ ಕೆತ್ತಿದ್ದು ಕೂಡ ಇದೇ ಶಿಲೆಯಲ್ಲಿ.
ಹತ್ತು ಅಡಿ ಆಳದಲ್ಲಿ ಭೂಮಿ ಕೊರೆದು ಬೃಹತ್ ಕಲ್ಲುಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ ಯಾರೋ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿರುವ ಅಧಿಕಾರಿಗಳು ಅನುಮತಿ ಇಲ್ಲದೇ ಅನಧಿಕೃತವಾಗಿ ಕಲ್ಲು ತೆಗೆದ ಹಿನ್ನೆಲೆಯಲ್ಲಿ ಕಲ್ಲುಗಳ ಗಾತ್ರಗಳ ಆಧಾರದಲ್ಲಿ 80 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತವನ್ನು ಗುತ್ತಿಗೆದಾರ ಶ್ರೀನಿವಾಸ್ ಪಾವತಿಸಿದ್ದರು. ಇದೀಗ ಸಂಸದ ಪ್ರತಾಪ್ ಸಿಂಹ ದಂದದ ಹಣವನ್ನು ಬಿಜೆಪಿ ಪಾವತಿಸುತ್ತದೆ ಎಂದು ತಿಳಿಸಿದ್ದಾರೆ