ಪಾನಮತ್ತನಾಗಿ ಸಂತೆಯಲ್ಲೇ ಜೆಸಿಬಿ ನುಗ್ಗಿಸಿದ ಚಾಲಕ: ದಿಕ್ಕಾಪಾಲಾಗಿ ಓಡಿದ ಜನ

ಮಂಡ್ಯ: ಪಾನಮತ್ತನಾಗಿ ಸಂತೆ ನಡೆಯುತ್ತಿದ್ದ ಸ್ಥಳಕ್ಕೆ ಚಾಲಕ ಜೆಸಿಬಿ ನುಗ್ಗಿಸಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ರಸ್ತೆ ಬದಿಯ ಅಂಗಡಿಗಳು, ತರಕಾರಿ ಅಂಗಡಿಗಳ ಮೇಲೆ ಜೆಸಿಬಿ ಹರಿದಿದೆ. ಹೋಟೆಲ್, ತಳ್ಳುವ ಗಾಡಿಗಳು ಛಿದ್ರವಾಗಿವೆ. ಜೆಸಿಬಿ ಬರುವುದನ್ನು ಗಮನಿಸಿದ ಜನ ಓಡಿದ್ದರಿಂದ ಪಾರಾಗಿದ್ದಾರೆ. ಕುಡಿದ ಅಮಲಿನಲ್ಲಿ ಜೆಸಿಬಿ ಚಾಲಕ ಮನಸೋಇಚ್ಛೆ ಜೆಸಿಬಿ ಚಾಲನೆ ಮಾಡಿ ಸಂತೆಯಲ್ಲಿ ನುಗ್ಗಿಸಿದ್ದಾನೆ.

ಜೆಸಿಬಿ ನಿಲ್ಲಿಸುವಂತೆ ವ್ಯಾಪಾರಿಗಳು, ಸಾರ್ವಜನಿಕರು ಕಲ್ಲು ತೂರಾಟ ನಡೆಸಿದ್ದಾರೆ. ಜೆಸಿಬಿ ಬೆನ್ನತ್ತಿದ ಜನ ಚಾಲಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಬಿಹಾರ ಮೂಲದ ಜೆಸಿಬಿ ಚಾಲಕ ರಾಜಕುಮಾರ್ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ರಾಜಕುಮಾರ್ ನನ್ನು ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕುಣಿಗಲ್ ಮೂಲದವರಿಗೆ ಸೇರಿದ ಜೆಸಿಬಿ ಇದಾಗಿದ್ದು, ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read