![](https://kannadadunia.com/wp-content/uploads/2022/06/M.B.Patil_-800x445-1.jpg)
ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಉತ್ಪಾದಿಸಲು ಅಗತ್ಯವಾಗಿರುವ ಲಿಥಿಯಂ ಸೆಲ್ ತಯಾರಿಕಾ ಸಂಸ್ಥೆ ಇಂಟರ್ ನ್ಯಾಷನಲ್ ಬ್ಯಾಟರಿ ಸಂಸ್ಥೆ -ಐಬಿಸಿ ರಾಜ್ಯದಲ್ಲಿ 8000 ಕೋಟಿ ರೂಪಾಯಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದೆ.
ದೇವನಹಳ್ಳಿ ಸಮೀಪ ಐಟಿಐಆರ್ನಲ್ಲಿ 100 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸಲು ಚಿಂತನೆ ನಡೆದಿದೆ. ಈ ಕುರಿತಾಗಿ ಬಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳು ಮೊದಲ ಹಂತದ ಚರ್ಚೆ ನಡೆಸಿದ್ದಾರೆ.
ವಿದ್ಯುತ್ ಚಾಲಿತ ವಾಹನ ಕ್ಷೇತ್ರ ಹೆಚ್ಚು ಜನಪ್ರಿಯವಾಗುತ್ತಿದ್ದು, ನಮ್ಮಲ್ಲಿ ಲಿಥಿಯಂ ಕೋಶಗಳ ಉತ್ಪಾದನೆ ಆಗುತ್ತಿಲ್ಲ. ಐಬಿಸಿ ರಾಜ್ಯದಲ್ಲಿ ಲಿಥಿಯಂ ಸೆಲ್ ಘಟಕ ಸ್ಥಾಪನೆಗೆ ಮುಂದೆ ಬಂದಿರುವುದು ಸ್ವಾಗತಾರ್ಹ ಎಂದು ಸಚಿವರು ಹೇಳಿದ್ದಾರೆ.
ಸಂಸ್ಥೆ ದೇವನಹಳ್ಳಿ ಸಮೀಪದ ಐಟಿಐಆರ್ ಪಾರ್ಕ್ ನಲ್ಲಿ 100 ಎಕರೆ ಜಾಗ ಹೇಳಿದೆ. ಸಂಸ್ಥೆ ಬೇಡಿಕೆ ಇಟ್ಟಿರುವ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಸಂಸ್ಥೆ ರಾಜ್ಯದಲ್ಲಿ ನೆಲೆಯೂರಲು ಅಗತ್ಯ ನೆರವು ಕಲ್ಪಿಸಲಾಗುವುದು. ನಮ್ಮ ಕೈಗಾರಿಕಾ ನೀತಿಯ ಅನ್ವಯ ಸಾಧ್ಯವಿರುವ ಎಲ್ಲಾ ಪ್ರೋತ್ಸಾಹ ನೀಡಲಾಗುತ್ತದೆ. ರಾಜ್ಯದಲ್ಲಿ ಹೂಡಿಕೆ ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.