ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನಕಪುರದಲ್ಲೂ ತಮ್ಮ ಎದುರಾಳಿಯಾಗಿ ಸ್ಪರ್ಧಿಸಿರುವ ಸಚಿವ ಆರ್. ಅಶೋಕ್ ಅವರಿಗೆ ಖೆಡ್ಡಾ ತೋಡಲು ಡಿಕೆ ಬ್ರದರ್ಸ್ ಸಜ್ಜಾಗಿದ್ದು, ಪದ್ಮನಾಭ ನಗರದಲ್ಲಿ ಇಂದು ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಆರ್. ಅಶೋಕ್, ಕನಕಪುರ ಹಾಗೂ ಪದ್ಮನಾಭನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಹೀಗಾಗಿಯೇ ಪದ್ಮನಾಭನಗರದಲ್ಲಿ ಅವರಿಗೆ ಟಕ್ಕರ್ ನೀಡಲು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸ್ಕೆಚ್ ಹಾಕಿದ್ದು, ಈ ಕ್ಷೇತ್ರದಲ್ಲೂ ತಮ್ಮ ಹವಾ ಇದೆ ಎಂಬುದನ್ನು ಇಂದಿನ ರೋಡ್ ಶೋನಲ್ಲಿ ಬಿಂಬಿಸಲಿದ್ದಾರೆ.
ಮೂಲಗಳ ಪ್ರಕಾರ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ಬದಲಿಗೆ ಕಡೆ ಕ್ಷಣದಲ್ಲಿ ಡಿ.ಕೆ. ಸುರೇಶ್, ಪದ್ಮನಾಭ ನಗರದಿಂದ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಮೂಲಕ ಆರ್. ಅಶೋಕ್ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿ ಹಾಕುವ ಪ್ರಯತ್ನ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಊಹಾಪೋಹಗಳಿಗೆ ಇಂದು ತೆರೆ ಬೀಳುವ ನಿರೀಕ್ಷೆ ಇದೆ.