ಇತ್ತ ದಕ್ಷಿಣ ಭಾರತದಲ್ಲಿ ಬೀಸುತ್ತಿರುವ ಶೀತಗಾಳಿಗೆ ಜನ ಹೈರಾಣಾಗಿದ್ರೆ, ಅತ್ತ ಉತ್ತರ ಭಾರತದ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಾರೀ ಪ್ರಮಾಣದ ಹಿಮಪಾತವಾಗಿದ್ದು ಜನ ಸಾವು-ಬದುಕಿನ ನಡುವೆ ಪರದಾಡೋ ಹಾಗಾಗಿದೆ. ಜನರು ಅತ್ತ ಮನೆಯಲ್ಲೂ ಇರೋಕ್ಕಾಗದೇ, ಹೊರಗೆ ಬರುವುದಕ್ಕಾಗದೇ ಪರದಾಡ್ತಿದ್ದಾರೆ. ಈ ನಡುವೆ ಅಲ್ಲಿ ದಿನದಿಂದ ದಿನಕ್ಕೆ ಅನೇಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ಇತ್ತೀಚೆಗೆ 80 ವರ್ಷದ ವೃದ್ಧೆಯೊಬ್ಬರು ಅನಾರೋಗ್ಯದಿಂದ ನರಳಾಡುತ್ತಿದ್ದರು. ಆಗ ಅವರ ಸಹಾಯಕ್ಕೆ ಭಾರತೀಯ ಸೇನೆಯ ಸೈನಿಕರು ಆಪತ್ಬಾಂಧವರಾಗಿ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಆ ವೃದ್ಧೆಯನ್ನ ಹಿಮದ ರಾಶಿಯ ನಡುವೆಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರೋಗಿಯನ್ನ ಸಮಯಕ್ಕೆ ಕರೆದುಕೊಂಡು ಬಂದಿದ್ದರಿಂದ, ಆಕೆಗೆ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಬೋನಿಯಾರ್ ತಹಸಿಲ್ನ ಜಬ್ರಿ ಗ್ರಾಮದ ಸರ್ದಾರ್ ಬೀವಾ ಎಂಬ ವೃದ್ಧೆ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು- ಜ್ವರದಿಂದ ಬಳಲುತ್ತಿದ್ದರು. ಆದರೆ ನಿರಂತರ ಹಿಮಪಾತವಾಗುತ್ತಿದ್ದರಿಂದ ಅವರಿಗೆ ಚಿಕಿತ್ಸೆಗೆ ಹೊರಗೆ ಹೋಗಲು ಸಾಧ್ಯವಾಗಿರಲಿಲ್ಲ. ಆಗ ಮೀರ್ ಮೊಹಮ್ಮದ್ ಅನ್ನುವವರು ಈಕೆಯ ದೂರದ ಸಂಬಂಧಿಯಾಗಿದ್ದು, ಅವರು ಭಾರತೀಯ ಸೇನೆಯ ಘಟಕಕ್ಕೆ ಕರೆ ಮಾಡಿ ವಿಷಯ ಹೇಳಿದ್ದಾರೆ.
ಕೊನೆಗೆ ಚಿನಾರ್ ಕಾರ್ಪ್ಸ್ನ ಸೈನಿಕರು, ಆಕೆಯನ್ನ ಸ್ಟ್ರೆಚರ್ ಮೇಲೆ ಮಲಗಿಸಿ ತಮ್ಮ ಭುಜದ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಾಗೆ ಹೋಗುವಾಗ ಅವರು ಮೊಣಕಾಲಿನ ತನಕ ಹಿಮ ತುಂಬಿದ ರಸ್ತೆಗಳಲ್ಲಿ ಹೆಜ್ಜೆ ಇಡ್ತಾ ಹೋಗಿದ್ದರು.
ಡಿಸೆಂಬರ್-ಜನವರಿ ತಿಂಗಳು ಬಂದರೆ ಸಾಕು, ಇಲ್ಲಿ ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿರುತ್ತೆ. ಹಿಮದಿಂದ ತುಂಬಿರುವ ರಸ್ತೆಗಳ ನಡುವೆ ಓಡಾಡುವುದು ಕಷ್ಟವಾಗಿರುತ್ತೆ. ಇಂತಹ ರಸ್ತೆಗಳಲ್ಲಿ ಎಷ್ಟೋ ಬಾರಿ ದೊಡ್ಡ ಮಟ್ಟದ ಅವಘಡಗಳು ಸಂಭವಿಸಿದೆ. ಆದ್ದರಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ವಯಸ್ಸಾದವರು ಆಸ್ಪತ್ರೆಗೆ ಹೋಗುವುದೇ ಸವಾಲಿನ ಕೆಲಸವಾಗಿರುತ್ತೆ. ಆ ಸಮಯದಲ್ಲಿ ಭಾರತೀಯ ಸೈನಿಕರೇ ಇಲ್ಲಿನವರ ಪಾಲಿಗೆ ಆಪತ್ಬಾಂಧವರಾಗಿರುತ್ತಾರೆ.