alex Certify ಸಾಂಪ್ರದಾಯಿಕ ಗುಜರಾತಿ ಹಿಂದೂ ಕುಟುಂಬ ಪದ್ಧತಿಯಲ್ಲಿ ಅನಂತ್ ಅಂಬಾನಿ – ರಾಧಿಕಾ ನಿಶ್ಚಿತಾರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಪ್ರದಾಯಿಕ ಗುಜರಾತಿ ಹಿಂದೂ ಕುಟುಂಬ ಪದ್ಧತಿಯಲ್ಲಿ ಅನಂತ್ ಅಂಬಾನಿ – ರಾಧಿಕಾ ನಿಶ್ಚಿತಾರ್ಥ

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ನಿಶ್ಚಿತಾರ್ಥ ಸಾಂಪ್ರದಾಯಿಕ ಕಾರ್ಯಕ್ರಮ ಇಂದು (ಜನವರಿ 19ರ ಗುರುವಾರ) ಮುಂಬೈನಲ್ಲಿನ ಮುಕೇಶ್ ಅಂಬಾನಿ ನಿವಾಸ ಆಂಟಿಲಿಯಾದಲ್ಲಿ ನಡೆಯಿತು.

ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ, ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಆಯಿತು. ಇದಕ್ಕೂ ಮುನ್ನ, ಕೆಲ ಸಮಯದ ಹಿಂದೆ ರಾಜಸ್ಥಾನದ ನಾಥದ್ವಾರದಲ್ಲಿ ಇರುವ ಶ್ರೀನಾಥಜೀ ದೇವಸ್ಥಾನದಲ್ಲಿ ಮದುವೆ ಗಟ್ಟಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗುಜರಾತಿ ಹಿಂದೂ ಕುಟುಂಬಗಳಲ್ಲಿ ತಲೆಮಾರುಗಳಿಂದಲೂ ಅನುಸರಿಸಿಕೊಂಡು ಬರುತ್ತಿರುವ ಗೋಲ್ ಧನ ಮತ್ತು ಚುನರಿ ವಿಧಿಯಂತಹ ಸಂಪ್ರದಾಯಗಳನ್ನು ಅನುಸರಿಸಿ, ಗುರುವಾರದಂದು ಎರಡು ಕುಟುಂಬಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡವು.

ಕುಟುಂಬದ ದೇವಾಲಯ ಮತ್ತು ಸಮಾರಂಭದ ಸ್ಥಳಗಳಲ್ಲಿ ಪದ್ಧತಿಗಳನ್ನು ಪಾಲಿಸಲಾಯಿತು. ಎರಡೂ ಕುಟುಂಬಗಳು (ಅಂಬಾನಿ ಮತ್ತು ಮರ್ಚೆಂಟ್) ಉಡುಗೊರೆಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡವು. ಬಹಳ ಉತ್ಸಾಹದಿಂದ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅನಂತ್ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರ ನೃತ್ಯ ಪ್ರದರ್ಶನ ಎಲ್ಲರನ್ನೂ ಬೆರಗುಗೊಳಿಸಿತು.

ಗೋಲ್ ಧನ ಎಂಬುದರ ಅಕ್ಷರಶಃ ಅರ್ಥ ಬೆಲ್ಲ ಮತ್ತು ಕೊತ್ತಂಬರಿ ಬೀಜಗಳು. ಅಂದ ಹಾಗೆ ಗುಜರಾತಿ ಸಂಪ್ರದಾಯದಲ್ಲಿ ಇದು ಮದುವೆಯ ಮುಂಚಿನ ಸಮಾರಂಭವಾಗಿದೆ. ಇದು ನಿಶ್ಚಿತಾರ್ಥವನ್ನು ಹೋಲುತ್ತದೆ. ಈ ಸಮಾರಂಭ ನಡೆಯುವ ವರನ ಸ್ಥಳದಲ್ಲಿ ಈ ವಸ್ತುಗಳನ್ನು ವಿತರಿಸಲಾಗುತ್ತದೆ.

ವಧುವಿನ ಕುಟುಂಬವು ವರನ ನಿವಾಸಕ್ಕೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳೊಂದಿಗೆ ಬರುತ್ತದೆ. ಮತ್ತು ಆ ನಂತರ ದಂಪತಿ ಆಗುವವರು ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಉಂಗುರ ಬದಲಾಯಿಸಿಕೊಂಡ ನಂತರ ತಮ್ಮ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ.

ಸಂಜೆಯ ಕಾರ್ಯಕ್ರಮಗಳಿಗೆ ರಾಧಿಕಾ ಮತ್ತು ಅವರ ಕುಟುಂಬ ಸದಸ್ಯರನ್ನು ಆಹ್ವಾನಿಸಲು ಅನಂತ್ ಸಹೋದರಿ ಇಶಾ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಮರ್ಚೆಂಟ್ ನಿವಾಸಕ್ಕೆ ಹೋಗುವುದರೊಂದಿಗೆ ಸಂಜೆಯ ಸಂಭ್ರಮ ಪ್ರಾರಂಭವಾಯಿತು. ಮರ್ಚೆಂಟ್ ಕುಟುಂಬವನ್ನು ಅಂಬಾನಿ ಕುಟುಂಬವು ಅವರ ನಿವಾಸದಲ್ಲಿ ಆರತಿ ಮತ್ತು ಮಂತ್ರಗಳ ಪಠಣದ ಮಧ್ಯೆ ಆತ್ಮೀಯವಾಗಿ ಬರಮಾಡಿಕೊಂಡಿತು.

ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯಲು ಮತ್ತು ಸಂಜೆಯ ಸಮಾರಂಭಗಳಿಗೆ ಅನಂತ್ ಮತ್ತು ರಾಧಿಕಾ ಅವರನ್ನು ಕುಟುಂಬಗಳು ಹಿಂಬಾಲಿಸಿ ದೇವಸ್ಥಾನಕ್ಕೆ ಹೋದವು. ಅಲ್ಲಿಂದ ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮಗಳನ್ನು ಪ್ರಾರಂಭಿಸಲು, ಅದಾದ ಮೇಲೆ ಸಾಂಪ್ರದಾಯಿಕ ಲಗ್ನ ಪತ್ರಿಕೆ ಓದುವಿಕೆ ಅಥವಾ ಮುಂಬರುವ ಮದುವೆಗೆ ಆಹ್ವಾನಕ್ಕಾಗಿ ಸಮಾರಂಭದ ಸ್ಥಳಕ್ಕೆ ತೆರಳಿತು. ಗೋಲ್ ಧನ ಮತ್ತು ಚುನರಿ ವಿಧಿ ನಂತರ ಅನಂತ್ ಮತ್ತು ರಾಧಿಕಾ ಅವರ ಕುಟುಂಬಗಳ ಮಧ್ಯೆ ಆಶೀರ್ವಾದ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ನೀತಾ ಅಂಬಾನಿ ನೇತೃತ್ವದಲ್ಲಿ ಅಂಬಾನಿ ಕುಟುಂಬದ ಸದಸ್ಯರ ನೃತ್ಯ ಪ್ರದರ್ಶನ ಇತ್ತು. ಆ ನಂತರ ಇಶಾ ಅವರು ಉಂಗುರ ಬದಲಾಯಿಸಿಕೊಳ್ಳುವ ಸಮಾರಂಭದ ಪ್ರಾರಂಭವನ್ನು ಘೋಷಿಸಿದರು. ಇದಾದ ಮೇಲೆ ಅನಂತ್ ಹಾಗೂ ರಾಧಿಕಾ ಅವರು ಕುಟುಂಬ ಮತ್ತು ಸ್ನೇಹಿತರ ಮುಂದೆ ಉಂಗುರಗಳನ್ನು ಬದಲಾಯಿಸಿಕೊಂಡರು. ಭವಿಷ್ಯದ ವಿವಾಹ ಜೀವನಕ್ಕೆ ಆಶೀರ್ವಾದ ಪಡೆದರು.

ಅನಂತ್ ಮತ್ತು ರಾಧಿಕಾ ಕೆಲವು ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ಈ ನಿಶ್ಚಿತಾರ್ಥ ಸಮಾರಂಭ ಮುಂದೆ ಅವರ ಮದುವೆ ಕಾರ್ಯಕ್ರಮದ ಆರಂಭದ ಹಂತವಾಗಿದೆ. ರಾಧಿಕಾ ಮತ್ತು ಅನಂತ್ ಅವರಿಗೆ ಎರಡೂ ಕುಟುಂಬಗಳು ಎಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತವೆ.

ನೀತಾ ಮತ್ತು ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ ಮತ್ತು ನಂತರ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಲಯನ್ಸ್ ರೀಟೇಲ್ ವೆಂಚರ್ಸ್‌ನ ಮಂಡಳಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸದ್ಯಕ್ಕೆ ರಿಲಯನ್ಸ್ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ.

ಶೈಲಾ ಮತ್ತು ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪದವೀಧರರಾಗಿದ್ದು, ಎನ್‌ಕೋರ್ ಹೆಲ್ತ್‌ಕೇರ್ ಮಂಡಳಿಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...