ಬೆಂಗಳೂರು: ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ 13 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶ ಹೊರಡಿಸಿದ್ದಾರೆ.
ಗುತ್ತಿಗೆ ನೌಕರರ ವಂಚನೆ ಪತ್ತೆ ಹಚ್ಚಲು 13 ಗೆಜೆಟೆಡ್ ಆಧಿಕಾರಿಗಳು ವಿಫಲರಾಗಿರುವ ಹಿನ್ನೆಲೆಯಲ್ಲಿ 13 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಧಿಕಾರಿಗಳ ವೈಫಲ್ಯದಿಂದಾಗಿ ಜಲಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜಲಮಂಡಳಿ ನೋಟ್ ಬ್ಯಾನ್ ಹಾಗೂ ಕೋವಿಡ್ ವೇಳೆ ನಗದು ಪಾವತಿಗೆ ಅವಕಾಶ ನೀಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಮಂಡಳಿಯ ಕೋಟಿ ಕೋಟಿ ಹಣ ವಂಚನೆ ಮಾಡಿದ್ದರು. ಮಂಡಳಿಯ 45 ಉಪವಿಭಾಗಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಈ ಸಂಬಂಧ ಜಲಮಂಡಳಿ ಹಲವು ಠಾಣೆಗಳಲ್ಲಿ ದೂರು ನೀಡಿತ್ತು. ಮಂಡಳಿ ಅಕ್ರಮ ಬೇಧಿಸಲು ಮೂರು ವಿಶೇಷ ತಂಡ ರಚನೆ ಮಾಡಲಾಗಿತ್ತು. ಆಂತರಿಕ ತನಿಖೆಯಲ್ಲಿ ಹಣ ದುರ್ಬಳಕೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರ್, ಕಂದಾಯ ವ್ಯವಸ್ಥಾಪಕರು, ಸಹಾಯಕರ ಕಲ್ಯಾಣ ಅಧಿಕಾರಿಗಳು ಸೇರಿದಂತೆ 13 ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.