
ಧನಿಯಾ ಕಾಳು ಅಥವಾ ಕೊತ್ತಂಬರಿ ಪುಡಿಯನ್ನು ಅಡುಗೆ ಮನೆಯ ಮಸಾಲ ಪದಾರ್ಥವಾಗಿ ಬಳಸುತ್ತೇವೆ. ಆದರೆ ಇದರಲ್ಲಿ ಅನೇಕ ಔಷಧಿಯ ಗುಣಗಳಿವೆ. ಇದನ್ನು ಬಳಸುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು.
ಧನಿಯಾ ಹಾಗೂ ಕಾಳು ಮೆಣಸಿನ ಪುಡಿಯಿಂದ ತಯಾರಿಸಿದ ಕಷಾಯ ಸೇವಿಸುವುದರಿಂದ ಕಟ್ಟಿದ ಮೂಗಿನಿಂದ ಮುಕ್ತಿ ಸಿಗುತ್ತದೆ. ಮೂಲವ್ಯಾದಿ ಸಮಸ್ಯೆ ಹೊಂದಿರುವವರು ಒಂದು ಚಮಚ ಧನಿಯಾವನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಬೆಲ್ಲ ಬೆರೆಸಿ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕ್ರಮೇಣ ಕಡಿಮೆಯಾಗುತ್ತದೆ. ಕನಿಷ್ಠ ಒಂದು ವಾರವಾದರೂ ಇದನ್ನು ಮುಂದುವರಿಸಿದರೆ ಪರಿಣಾಮ ಸ್ಪಷ್ಟವಾಗಿ ಕಂಡುಬರುತ್ತದೆ.
ವಯಸ್ಸಾದವರಲ್ಲಿ ಮೂತ್ರ ಸರಿಯಾಗಿ ಆಗದಿದ್ದರೆ 5 ರಿಂದ 6 ಧನಿಯಾ ಕಾಳುಗಳನ್ನು ಜಜ್ಜಿ ಅದರ ರಸ ಸೇವಿಸುವುದರಿಂದ ವಿಸರ್ಜನೆ ಸರಿಯಾಗಿ ಆಗುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದ್ದರೆ ಅಥವಾ ಹುಳಿ ತೇಗು ಬರುತ್ತಿದ್ದರೆ ಇದನ್ನು ನಾಲ್ಕು ಕಾಳು ಬಾಯಿಗೆ ಹಾಕಿ ಜಗಿಯಿರಿ. ಅಥವಾ ಇದರ ಕಷಾಯಕ್ಕೆ ಬೆಲ್ಲ ಬೆರೆಸಿ ಕುಡಿಯಿರಿ.
ಕೊತ್ತಂಬರಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮುಂಜಾನೆ ಅದರ ನೀರು ಸೇವಿಸುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಜ್ವರ ಬಂದಾಗ ಧನಿಯಾ ಹಾಗೂ ಶುಂಠಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.