ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರವಾಗಿ ಬಿಜೆಪಿ ಪರ್ಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಅವರ ಮನೆಯಲ್ಲಿ ಇವರು ತಿಂಡಿ ತಿನ್ನುವುದು, ಇವರ ಮನೆಯಲ್ಲಿ ಅವರು ತಿಂಡಿ ತಿನ್ನುವುದು. ಬರಿ ತಿಂಡಿ ತಿನ್ನುವ ವಿಷಯವೇ ಚರ್ಚೆಯಾಗುತ್ತಿದೆ. ಹೊರತು ರಾಜ್ಯದ ಸಮಸ್ಯೆ ಚರ್ಚೆಯಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ದಿನಕ್ಕೊಂದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯಿಂದಾಗಿ 580 ಜನ ಬಲಿಯಾಗಿದ್ದಾರೆ, ರಾಜ್ಯದ ರೈತರು ಸಮಸ್ಯೆಯಲ್ಲಿದ್ದಾರೆ. ಮೆಕ್ಕೆಜೋಳ ಖರೀದಿ ಕೇಂದ್ರ ಇನ್ನೂ ಸ್ಥಾಪನೆಯಾಗಿಲ್ಲ. ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ. ಈ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಅದು ಬಿಟ್ಟು ತಿಂಡಿ ತಿನ್ನುವ ವಿಚಾರವೇ ಚರ್ಚೆಯಾಗುತ್ತಿರುವುದು ದುರಂತ ಎಂದು ಗುಡುಗಿದರು.
ಬ್ರೇಕ್ ಫಾಸ್ಟ್ ವಿಚಾರ ರಾಜ್ಯದ ಜ್ವಲಂತ ಸಮಸ್ಯೆನಾ? ರಾಷ್ಟ್ರದ ಸಮಸ್ಯೆನಾ? ಇದು ಚರ್ಚೆಯಾಗಬೇಕಾದ ವಿಷಯವೇ? ಚರ್ಚಿಸಬೇಕಾದ ವಿಷಯ ರಾಜ್ಯದಲ್ಲಿ ಸಾಕಷ್ಟಿದೆ. ಅನಗತ್ಯವಾಗಿ ವಿಷಯಾಂತರ ಬೇಡ ರಾಜ್ಯದಲ್ಲಿ ಜನರು, ರೈತರು ಪಡುತ್ತಿರುವ ಸಂಕಷ್ಟಗಳ ಬಗ್ಗೆ ಅಭಿವೃದ್ದಿ ಬಗ್ಗೆ ಸರ್ಕಾರ ಮೊದಲು ಗಮನ ಹರಿಸಲಿ. ಅದನ್ನು ಬಿಟ್ಟು ಯಾರ ಮನೆಯಲ್ಲಿ ತಿಂಡಿ ತಿನ್ನುವುದು. ಬಟ್ಟೆ ಯಾವುದು ಹಾಕಿಕೊಕೊಳ್ಳೋದು ಇದೆಲ್ಲ ಚರ್ಚೆ ಮಾಡಿ ಕಾಲ ಕಳೆಯಬೇಡಿ ಎಂದಿದ್ದಾರೆ.
