ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬೆಂಗಳೂರಿನಂತಹ ಸುರಕ್ಷಿತ ನಗರದಲ್ಲೇ 7.11 ಕೋಟಿ ದರೋಡೆ ಮಾಡಿದ್ದಾರೆ. ಇದೊಂದೇ ಪ್ರಕರಣ ಅಲ್ಲ, ಬಿಜಾಪುರದಲ್ಲೂ ಎರಡು ಬ್ಯಾಂಕ್ ಗಳ ದರೋಡೆ ಆಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಆಗಿದೆ. ಅಂದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದು ದೃಢವಾಗಿದೆ. ಗೃಹ ಸಚಿವರು ಗೊತ್ತಿಲ್ಲ ಪರಿಶೀಲನೆ ಮಾಡ್ತೀವಿ, ದರೋಡೆಕೋರರನ್ನು ಹಿಡಿತೀವಿ ಎಂದಿದ್ದಾರೆ. ಇದಕ್ಕೆಲ್ಲಾ ಅವರ ಇಲಾಖೆ ಸರಿಯಾಗಿ ಕೆಲಸ ಮಾಡದಿರುವುದು ಕಾರಣ ಎಂದು ಗುಡುಗಿದರು.
ಶಾಸಕರೇ ಪೊಲೀಸರ ವರ್ಗಾವಣೆಯನ್ನು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಯಾವ ಅರ್ಹ ಅಧಿಕಾರಿಗಳು, ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡದಿರದ ಪರಿಸ್ಥಿತಿ ಈ ಸರ್ಕಾರದಲ್ಲಿದೆ. ಕಾಂಗ್ರೆಸ್ ನಾಯಕರೆಲ್ಲರೂ ದೆಹಲಿ ಸೇರಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಜನರು ಸಂಕಷ್ಟ ಪಡಬೇಕಾದ ಸ್ಥಿತಿ ಇದೆ ಎಂದರು.
