ಗದಗ: ಯುವಕನೊಬ್ಬನನ್ನು ಕಳ್ಳ ಎಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಆತನನ್ನು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ಗದಗ ಜಿಲ್ಲೆಯ ವಿವೇಕಾನಂದ ನಗರದಲ್ಲಿ ನಡೆದಿದೆ.
ಇಂದು ನಸುಕಿನಜಾವ ಯುವಕನೊಬ್ಬ ವಿವೇಕಾನಂದ ನಗರ ಬಡಾವಣೆಯಲ್ಲಿ ಓಡಾಡಿದ್ದ, ಸ್ಥಳೀಯರು ಹೇಳುವ ಪ್ರಕಾರ ಮನೆಯ ಬಾಗಿಲು ಬಡಿದಿದ್ದಾನೆ. ಹಾಗಾಗಿ ಯುವಕನನ್ನು ಕಳ್ಳ ಎಂದು ಭಾವಿಸಿ ಗ್ರಾಮಸ್ಥರೆಲ್ಲರೂ ಆತನನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಜೊತೆಗೆ ಪೊಲೀಸ್ ವಾಹನದ ಸೈರನ್ ಶಬ್ಧ ಕೇಳಿ ಭಯಗೊಂಡ ಯುವಕ ತಪ್ಪಿಸಿಕೊಳ್ಳಲು ತೆಂಗಿನಮರವೇರಿ ಕುಳಿತಿದ್ದಾನೆ. ಯುವಕನನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿಯಾಗಿರುವ ಬಸವರಾಜ್ ನಸುಕಿನ ಜಾವ ಗದಗದ ವಿವೇಕಾನಂದ ನಗರಕ್ಕೆ ಬಂದಿದ್ದ. ಈ ವೇಳೆ ಈ ಘಟನೆ ನಡೆದಿದೆ.
ಸುಮಾರು ನಾಲ್ಕು ಗಂಟೆಗಳ ಕಾಲ ತೆಂಗಿನ ಮರದಲ್ಲೇ ಯುವಕ ಕಾಲಕಳೆದಿದ್ದಾನೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ಮರದಿಂದ ಕೆಳಗಿಳಿಸಿದ್ದಾರೆ.
