ಕೋಲಾರ: ಕೋಲಾರದಲ್ಲಿ ಆಟೋ ಚಾಲಕರೊಬ್ಬರನ್ನು ಬರ್ಬರವಾಗಿ ಹತ್ಯೆಗೈದು ಶವ್ವನ್ನು ಆತನ ಆಟೋದಲ್ಲಿಯೇ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದ ಆಫ್ರಿದಿ ಕೊಲೆಯಾದ ಆಟೋ ಚಾಲಕ. ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಗರ್ಭಿಣಿಯಾಗಿದ್ದು, ದಂಪತಿ ಮೂರನೆ ಮಗುವಿನ ನಿರೀಕ್ಷೆಯಲ್ಲಿದ್ದರು.
ಪತ್ನಿ ಎರಡುದಿನಗಳ ಹಿಂದೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಳು. ನಿನ್ನೆ ರಾತ್ರಿ ಎಳೆಸಂದ್ರದಿಂದ ಬೆಂಗಳೂರಿಗೆ ಅಫ್ರಿದಿ ಹೊರಟಿದ್ದ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಆತನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಆಟೋದಲ್ಲಿಯೇ ರಕ್ತಸಿಕ್ತ ರೀತಿಯಲ್ಲಿ ಅಫ್ರಿದಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.