ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ದಾಖಲಾಗಿರುವ ಮಾಹಿತಿಗೂ ಜನ ಸಂಖ್ಯೆಗೂ ಹೊಂದಾಣಿಕೆಯಾಗದ ಕಾರಣ ಪಡಿತರ ಚೀಟಿಯಲ್ಲಿರುವ ಮಾಹಿತಿ ಆಧರಿಸಿ ಪುನರ್ ಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ಸಮೀಕ್ಷೆಯಿಂದ ಹೊರಗುಳಿದವರ ಪತ್ತೆಗೆ ಮುಂದಾಗಿದ್ದು, ಇದು ಸಹಜವಾಗಿ ಸಮೀಕ್ಷೆ ನಡೆಸುತ್ತಿರುವವರಿಗೆ ಮತ್ತೊಂದು ಕೆಲಸದ ಭಾರ ಹೆಚ್ಚಿಸಿದಂತಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶೇಕಡ 80 ರಿಂದ 90 ರಷ್ಟು ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಕೆಲವು ಕುಟುಂಬಗಳ ವಿಳಾಸ ಗಣತಿದಾರರಿಗೆ ಸಿಗುತ್ತಿಲ್ಲ. ಕೆಲವರು ತಮ್ಮ ಕುಟುಂಬದ ಕೆಲವು ಸದಸ್ಯರ ಹೆಸರನ್ನು ಗಣತಿಯಲ್ಲಿ ದಾಖಲಿಸಿಲ್ಲ. ಹೀಗಾಗಿ ಪಡಿತರ ಚೀಟಿ ಪಟ್ಟಿಯನ್ನು ಗಣಿತಿದಾರರ ಕೈಗೆ ನೀಡಲಾಗಿದ್ದು, ಸಮೀಕ್ಷೆಯಿಂದ ಹೊರಗುಳಿದವರನ್ನು ಗುರುತಿಸಿ ಸೂಚನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಇಲಾಖೆ ರಾಜ್ಯದ 7 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಹೊಂದಿತ್ತು. ಆದರೆ ಗಣತಿಯಲ್ಲಿ ಭಾಗಿಯಾದವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಒಪ್ಪದವರಿಂದ ನಿರಾಕರಣೆ ಪತ್ರ ಪಡೆದರೂ ಜನಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಬಳಿ ಪಡಿತರ ಫಲಾನುಭವಿಗಳ ಪಟ್ಟಿ ಪಡೆದು ಅದರಲ್ಲಿರುವ ಫಲಾನುಭವಿಗಳೆಲ್ಲರೂ ಗಣತಿಯ ಭಾಗವಾಗಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಾಗುವುದು. ಈಗಾಗಲೇ ಸಮೀಕ್ಷೆ ಮುಗಿದ ಮನೆಗಳಿಗೆ ಗಣತಿದಾರರು ಮತ್ತೊಮ್ಮೆ ಭೇಟಿ ಕೊಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಲಾಗಿದೆ.