ಅಹಮದಾಬಾದ್: ಬ್ಯಾಂಕುಗಳಲ್ಲಿ ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ವಾರಸುದಾರರು ಇಲ್ಲದ 1.84 ಲಕ್ಷ ಕೋಟಿ ಆಸ್ತಿ ಇದೆ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಗುಜರಾತ್ ಹಣಕಾಸು ಸಚಿವೆ ಕನುಭಾಯಿ ದೇಸಾಯಿ ಮತ್ತು ಬ್ಯಾಂಕುಗಳು ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗಾಂಧಿನಗರದಲ್ಲಿ ‘ನಿಮ್ಮ ಹಣ ನಿಮ್ಮ ಹಕ್ಕು’ ತ್ರೈಮಾಸಿಕ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ಬ್ಯಾಂಕುಗಳಲ್ಲಿ ಠೇವಣಿ ವಿಮೆ, ಪಿಎಫ್, ಷೇರಿನ ರೂಪದಲ್ಲಿ ಅಪಾರ ಮೊತ್ತದ ಆಸ್ತಿ ವಾರಸುದಾರರಿಲ್ಲದೆ ಕೊಳೆಯುತ್ತಿದ್ದು. ಈ ಹಣವನ್ನು ಅದರ ಸರಿಯಾದ ಮಾಲೀಕರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದಡಿ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ವಾರಸುದಾರರು ಇಲ್ಲದ ಈ ಮೊತ್ತಕ್ಕೆ ಸರ್ಕಾರವೇ ಉಸ್ತುವಾರಿಯಾಗಿದೆ. ಅರ್ಹರು ದಾಖಲೆಗಳೊಂದಿಗೆ ಬಂದು ಹಣವನ್ನು ವಾಪಸ್ ಪಡೆಯಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕ್ಲೇಮ್ ಮಾಡದ ಹಣವು ಬ್ಯಾಂಕುಗಳಲ್ಲಿ ಅಥವಾ ಆರ್ಬಿಐ ಅಥವಾ ಐಇಪಿಎಫ್(ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ) ಯಲ್ಲಿ ಉಳಿದಿದೆ. ಆ ನಿಧಿಗಳ ನಿಜವಾದ ಮಾಲೀಕರು ಮತ್ತು ಹಕ್ಕುದಾರರನ್ನು ನಾವು ಹುಡುಕಬೇಕು ಮತ್ತು ಹಣವನ್ನು ಅವರಿಗೆ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ.
ನೀವು ಸರಿಯಾದ ದಾಖಲೆಗಳೊಂದಿಗೆ ಬಯಸಿದಾಗ ಬನ್ನಿ. ಹಣವನ್ನು ನಿಮಗೆ ನೀಡಲಾಗುವುದು. ಸರ್ಕಾರವು ಅದರ ಪಾಲಕ. ಅದು ಬ್ಯಾಂಕ್ ಮೂಲಕ ಅಥವಾ ಸೆಬಿ ಮೂಲಕ ಆಗಿರಬಹುದು. ಅದು ಬೇರೆ ಯಾವುದೇ ಸಂಸ್ಥೆಯ ಮೂಲಕ ಆಗಿರಬಹುದು. ಆದರೆ ಅದು ಅಲ್ಲಿ ಸುರಕ್ಷಿತ ಕಸ್ಟಡಿಯಲ್ಲಿದೆ ಎಂದು ಅವರು ಭರವಸೆ ನೀಡಿದ್ದಾರೆ.