ಮೈಸೂರು: ಸ್ವಂತ ಮನೆ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿ ಅದರ ಬದಲು ಎಪಿಎಲ್ ಕಾರ್ಡ್ ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷ ಪಿಡಿಎಸ್ ಮುಂದುವರೆಸುತ್ತೇನೆ ಎಂದಿದ್ದಾರೆ. ಬಡವರಿಗಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮನೆ ಇರುವವರಿಗೆ ಅದು, ಇಲ್ಲದವರಿಗೆ ಇದು ಅಂತ ಯಾವುದನ್ನು ಹೇಳಿಲ್ಲ. ನಮ್ಮ ನಿಬಂಧನೆ ನೀಡಿದ್ದೇವೆ. ಈ ಕಾಂಗ್ರೆಸ್ ನವರು ಚಂದ್ರಲೋಕ, ಇಂದ್ರಲೋಕ ತರುತ್ತೇವೆ ಎಂದಿದ್ದರು. ಆದರೆ, ಯಾವುದೂ ಆಗಿಲ್ಲ. ಇದಕ್ಕಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಹಾರ ಸಚಿವ ಮುನಿಯಪ್ಪ ಅವರಿಗೆ ಏನೂ ಗೊತ್ತಿಲ್ಲ. ಏನೂ ಇಲ್ಲದೆ ಬರೀ ಬೆತ್ತಲೆ ಆಗಿದ್ದೀರಾ? ಕೇಂದ್ರದ ಮೇಲೆ ಅದನ್ನು ಹಾಕಬೇಡಿ. ನಿಮ್ಮ ಪಾಪದ ಕೃತ್ಯಕ್ಕೆ ನೀವೇ ಹೊಣೆ. ಬಿಪಿಎಲ್ ರದ್ದತಿಗೆ ರಾಜ್ಯವೇ ಹೊಣೆಯಾಗಿದೆ. ಸ್ವಂತ ಮನೆ ಇದ್ದವರ ಬಿಪಿಎಲ್ ರದ್ದು ಮಾಡುವುದು ಪಾಪದ ಕೃತ್ಯ ಎಂದು ಸೋಮಣ್ಣ ಹೇಳಿದ್ದಾರೆ.