ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗದಿಪಡಿಸಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳು ಸೆಪ್ಟೆಂಬರ್ 25 ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಅದೇ ದಿನ ಆರೋಪಿಗಳ ವಿರುದ್ಧ ಪೊಲೀಸರು ಹೊರಿಸಿರುವ ರೇಣುಕಾಸ್ವಾಮಿ ಅಪಹರಣ, ಕೊಲೆ, ಸುಲಿಗೆ, ಸಾಕ್ಷ್ಯ ನಾಶ ಸೇರಿದಂತೆ ಇತರೆ ದೋಷಾರೋಪಗಳ, ನಿಗದಿಯಾಗಲಿದೆ.
ಇನ್ನು ಜೈಲಿನಲ್ಲಿ ಹಾಸಿಗೆ, ದಿಂಬು ನೀಡಬೇಕಾದ ಆದೇಶ ಪಾಲಿಸುತ್ತಿಲ್ಲ ಎಂದು ದರ್ಶನ್ ಸಲ್ಲಿಸಿದ ಅರ್ಜಿ ಕುರಿತ ಆದೇಶವನ್ನು ಸೆಪ್ಟೆಂಬರ್ 25 ರಂದು ನ್ಯಾಯಾಲಯ ಪ್ರಕಟಿಸಲಿದೆ. ಜೈಲಿನ ನಿಯಮದ ಪ್ರಕಾರ ಹಾಸಿಗೆ, ದಿಂಬು, ಮೂಲಸೌಕರ್ಯ ನೀಡುವಂತೆ ಕೋರ್ಟ್ ಆದೇಶಿಸಿದ್ದರೂ ಜೈಲು ಅಧಿಕಾರಿಗಳು ಪಾಲಿಸಿಲ್ಲವೆಂದು ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಕುರಿತಾದ ಆದೇಶವೂ ಸೆಪ್ಟೆಂಬರ್ 25ರಂದು ಪ್ರಕಟವಾಗಲಿದೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದೀಪಕ್ ಮತ್ತು ಪ್ರದೋಷ್ ಅವರನ್ನು ದೋಷಾರೋಪಣೆಯಿಂದ ಕೈ ಬಿಡಲು ಕೋರ್ಟ್ ನಿರಾಕರಿಸಿದ್ದು, ಈ ಕುರಿತಾದ ಅರ್ಜಿಯನ್ನು ವಜಾಗೊಳಿಸಿದೆ.