ನವದೆಹಲಿ: ಮಾಜಿ ಸಚಿವ ಮುರುಗೇಶ್ ನಿರಾಣಿ ಪುತ್ರನ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಧೋಳದ ನಿರಾಣಿ ಶುಗರ್ಸ್ ನ ಡಿಸ್ಟಿಲರಿ ಘಟಕದ ಇಟಿಪಿ ಬಾಯ್ಲರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮುರುಗೇಶ್ ನಿರಾಣಿ ಅವರ ಪುತ್ರ ವಿಜಯ್ ನಿರಾಣಿ ಮತ್ತು ಇತರರ ವಿರುದ್ಧ ತನಿಖೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ನೀಡಿದೆ.
ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ರದ್ದುಗೊಳಿಸಿ 2023ರಲ್ಲಿ ನೀಡಿದ ಆದೇಶವನ್ನು ನ್ಯಾಯಮೂರ್ತಿಗಳದ ಸಂಜಯ್ ಕರೋಲ್ ಮತ್ತು ದೀಪಕ್ ಮೆಹ್ತಾ ಅವರ ಪೀಠ ರದ್ದುಗೊಳಿಸಿದೆ.
ವಿಜಯ್ ನಿರಾಣಿ ವಿರುದ್ಧದ ಕಾನೂನು ಕ್ರಮಗಳಿಗೆ ಹೈಕೋರ್ಟ್ ತಡೆ ನೀಡಿದ್ದು, ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದು, ವಿಜಯ್ ನಿರಾಣಿ ವಿರುದ್ಧ ಕಾನೂನು ರೀತಿ ತನಿಖೆಗೆ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಪರವಾಗಿ ವಕೀಲ ಡಿ.ಎಲ್. ಚಿದಾನಂದ ಸಲ್ಲಿಸಿದ ಮನವಿಯ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯ ಪೀಠ ವಿಚಾರಣೆ ನಡೆಸಲು ಅನುಮತಿ ಅಗತ್ಯವಿಲ್ಲ ಎಂದು ತಿಳಿಸಿದೆ. ಮುಂದಿನ ವಿಚಾರಣೆಗೆ ಈ ವಿಷಯವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂತಿರುಗಿಸಲಾಗಿದೆ. 2019 ರಲ್ಲಿ ಕಂಪನಿಯ ನಿರ್ದೇಶಕ ವಿಜಯ್ ನಿರಾಣಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.