ಬೆಂಗಳೂರು: ಸೌಜನ್ಯ ತಾಯಿ ಕೂಡ ಷಡ್ಯಂತ್ರಕ್ಕೆ ಬಲಿಯಾಗಿರಬಹುದು. ಹಾಗಾಗಿ ಅವರನ್ನೂ ವಿಚಾರಣೆ ನಡೆಸಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಸುಜಾತಾ ಭಟ್ ಅವರನ್ನು ಹೇಗೆ ಆ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿತ್ತು. ಸುಜಾತಾ ಭಟ್ ಅವರನ್ನು ಮುಂದಿಟ್ಟುಕೊಂಡು ದಿನದಿಂದ ದಿನಕ್ಕೆ ಕಟ್ಟುಕಥೆ ಹೆಣೆದಿತ್ತು. ಇದೀಗ ಸುಜಾತಾ ಭಟ್ ಅವರೇ ಯಾರೋ ತನ್ನನು ಹೆದರಿಸಿ ಬೆದರಿಸಿ ಹೀಗೆ ಮಾಡಿಸಿದ್ದಾಗೆ ಹೇಳಿದ್ದಾರೆ ಎಂದರು.
ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆ ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರವೆಸಗಿದವರು ಜೈಲು ಸೇರಬೇಕು ಎಂದು ನಾನೂ ಆಗ್ರಹ ಮಾಡುತ್ತೇನೆ. ಈ ಬದ್ಧತೆ ಇಟ್ಟುಕೊಂಡೇ ನಾನೂ ಮಾತನಾಡುತ್ತಿದ್ದೇನೆ. ಈಗ ಹೇಗೆ ಮಾಸ್ಕ್ ಮ್ಯಾನ್, ಸುಜಾತಾ ಭಟ್ ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದೋ ಷಡ್ಯಂತ್ರಕ್ಕೆ ಒಳಗಾಗಿದ್ದಾರಾ? ಎಂಬ ಶಂಕೆ ಇದೆ. ಹಾಗಾಗಿ ಅವರನ್ನೂ ವಿಚಾರಣೆ ನಡೆಸಬೇಕು ಎಂದಿದ್ದಾರೆ.