ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸುವುದಾಗಿ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ ಸಿಂಹ ನಾಯಕ್, ಕಾಂಗ್ರೆಸ್ ನ ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿ ರಾಜ್ಯದಲ್ಲಿ ಶೇಕಡ 74 ರಷ್ಟು ಬಿಪಿಎಲ್ ಕಾರ್ಡುಗಳಿವೆ. ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲಿಯೂ ಇಷ್ಟು ಬಿಪಿಎಲ್ ಕಾರ್ಡ್ ಇಲ್ಲ. ಕರ್ನಾಟಕದಲ್ಲಿ ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ.
1.28 ಕೋಟಿ ಕಾರ್ಡ್ ಗೆ ಅಕ್ಕಿ ನೀಡಲಾಗುತ್ತಿದೆ. 3.27 ಲಕ್ಷ ಬಿಪಿಎಲ್ ಕಾರ್ಡ್ ಕೊಡುವುದು ಬಾಕಿ ಇದೆ. ಎಪಿಎಲ್ ಗೆ ಅರ್ಹತೆ ಇರುವವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು, ಅಧಿವೇಶನದ ಬಳಿಕ ಪರಿಷ್ಕರಣೆ ಆರಂಭಿಸಲಾಗುವುದು. ಅನರ್ಹ ಬಿಪಿಎಲ್ ಕಾರ್ಡುಗಳನ್ನು ಪರಿಷ್ಕರಿಸಿ ಅಂತಹ ಕಾಡುಗಳನ್ನು ರದ್ದು ಮಾಡಲಾಗುವುದು. ಅರ್ಜಿ ಹಾಕಿರುವ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಜನ ಕಾಯುತ್ತಿದ್ದಾರೆ. ಅರ್ಜಿ ಹಾಕಿದವರಿಗೆ ಪಡಿತರ ಚೀಟಿ ನೀಡಬೇಕು ಎಂದು ಯತಿಂದ್ರ ಸಿದ್ದರಾಮಯ್ಯ, ಪ್ರತಾಪ ಸಿಂಹ ನಾಯಕ್ ಅವರು ಒತ್ತಾಯಿಸಿದರು. ಬಿಪಿಎಲ್ ಕಾರ್ಡ್ ವಿತರಣೆ ಬಾಕಿ ಇದ್ದು, ಬಡವರಿಗೆ ತೊಂದರೆಯಾಗುತ್ತಿದೆ. ಅನರ್ಹರ ಕಾರ್ಡ್ ರದ್ದು ಮಾಡಿ ಅಗತ್ಯವಿರುವವರಿಗೆ ಪಡಿತರ ಚೀಟಿ ಕೊಡಬೇಕು ಎಂದು ಹೇಳಿದ್ದಾರೆ.