ಹುಬ್ಬಳ್ಳಿ: ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತೆ ನೇಣು ಬಿಗಿಸ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ನಂದಗೋಕುಲ ಬಡಾವಣೆಯಲ್ಲಿ ನಡೆದಿದೆ.
ಜಯಶ್ರೀ ಬಡಿಗೇರ (31) ಮೃತ ನವವಿವಾಹಿತೆ. ಮೂರು ತಿಂಗಳ ಹಿಂದಷ್ಟೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ ಶಿವಾನಂದ ಎಂಬಾತನ ಜೊತೆ ಜಯಶ್ರೀ ವಿವಾಹವಾಗಿತ್ತು. ಮದುವೆಗೂ ಮುನ್ನ ಶಿವಾನಂದ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಷಯ ಮುಚ್ಚಿಟ್ಟು ಜಯಶ್ರೀಯನ್ನು ವಿವಾಹವಾಗಿದ್ದ.
ಮದುವೆ ಬಳಿಕ ಶಿವಾನಂದ ಪ್ರೀತಿಸಿದ್ದ ಯುವತಿ, ಜಯಶ್ರೀಗೆ ತಮ್ಮ ಪ್ರೇಮದ ವಿಚಾರ ಹೇಳಿದ್ದಳಂತೆ. ಅಲ್ಲದೇ 13 ವರ್ಷದ ಪ್ರೀತಿಯನ್ನು ಮುಚ್ಚಿಟ್ಟು ನಿನ್ನನ್ನು ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಳಂತೆ. ಇದರಿಂದ ಜಯಶ್ರೀ ಹಾಗೂ ಶಿವಾನಂದ ದಂಪತಿ ನಡುವೆ ಜಗಳವಾಗಿದೆ. ಆದಾಗ್ಯೂ ಪತಿ ಜೊತೆಯೇ ಇರಲು ಜಯಶ್ರೀ ಮುಂದಾಗಿದ್ದಳು. ಇದೇ ವಿಚಾರವಾಗಿ ನಿನ್ನೆ ರಾತ್ರಿ ಕೂಡ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಈಗ ಜಯಶ್ರೀ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಮದುವೆ ಬಳಿಕ ಶಿವಾನಂದ ಜಯಶ್ರಿಗೆ ಮಾನಸಿಕವಾಗಿ ಕಿರುಕುಳ, ಹಿಂಸೆ ನೀಡುತ್ತಿದ್ದ. ಈಗ ತಮ್ಮ ಮಗಳನ್ನು ಕೊಲೆಗೈದು ನೇಣು ಬಿಗಿದಿದ್ದಾಗಿ ಜಯಶ್ರೀ ಪೋಷಕರು ದೂರಿದ್ದಾರೆ. ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.