ಬೆಳಗಾವಿ: ಕೃಷಿ ಹೊಂಡದಲ್ಲಿ ಮುಳುಗಿ ತಂದೆ, ಮಗ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಕೆಂಗೇರಿ(40), ಧರೆಪ್ಪ(14) ಮೃತಪಟ್ಟವರು ಎಂದು ಹೇಳಲಾಗಿದೆ. ಮೃತರು ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಗಳಾಗಿದ್ದಾರೆ.
ಬಸವರಾಜ ಪತ್ನಿ ಊರಲ್ಲಿ ಜಮೀನಿಗೆ ಕೀಟನಾಶಕ ಸಿಂಪಡಿಸಲು ಹೋಗಿದ್ದರು. ಕೃಷಿಹೊಂಡದಲ್ಲಿ ನೀರು ತರಲು ಹೋಗಿ ಬಾಲಕರು ಬಿದ್ದಿದ್ದಾರೆ. ಧರೆಪ್ಪ ಮತ್ತು ಬಾಗಪ್ಪ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಇಬ್ಬರ ರಕ್ಷಣೆಗೆ ಬಸವರಾಜ ಧಾವಿಸಿದ್ದಾರೆ.
ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಾಗಪ್ಪನನ್ನು ರಕ್ಷಣೆ ಮಾಡಿದ್ದಾರೆ. ಹೊಂಡದಲ್ಲಿ ಮುಳುಗಿ ಬಸವರಾಜ ಮತ್ತು ಧರೆಪ್ಪ ಸಾವನ್ನಪ್ಪಿದ್ದಾರೆ. ಬಾಗಪ್ಪನನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.