ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಸೇತುವೆ ಮೇಲಿಂದ ಪತಿಯನ್ನು ನದಿಗೆ ತಳ್ಳಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅಪ್ರಾಪ್ತ ಬಾಲಕಿಯನ್ನು ಪತಿ ತಾತಪ್ಪ ಮದುವೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಪತ್ನಿ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪ ಅವರಿಗೆ ಡೆಡ್ ಲೈನ್ ನೀಡಲಾಗಿದೆ. ಇಲ್ಲದಿದ್ದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪತಿ ತಾತಪ್ಪ ಮತ್ತು ಅವರ ಮದುವೆ ಸಮಾರಂಭದಲ್ಲಿ ಭಾಗಿಯಾದ ಪ್ರಮುಖರ ವಿರುದ್ಧ ಕೇಸ್ ದಾಖಲಿಸಲಾಗುವುದು.
ಶಾಲಾ ದಾಖಲಾತಿಯ ಪ್ರಕಾರ ತಾತಪ್ಪನ ಪತ್ನಿ ಅಪ್ರಾಪ್ತೆ ಎನ್ನುವುದು ದೃಢಪಟ್ಟಿದೆ. 15 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿ ಎನ್ನುವುದು ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲಾ ಮಹಿಳಾ ರಕ್ಷಣಾಧಿಕಾರಿಗಳ ತಂಡದಿಂದ ಇದನ್ನು ಪತ್ತೆ ಮಾಡಲಾಗಿದೆ. ಕ್ರಮ ಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ. ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಬರೆದ ಪತ್ರ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ರಾಯಚೂರು ತಾಲೂಕಿನ ದೇವಸೂಗೂರು ನಿವಾಸಿಯಾಗಿರುವ ಪತಿ ತಾತಪ್ಪ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಸಿಡಿಪಿಓ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ವಿವಾಹದ ಕುರಿತು ತಾತಪ್ಪನ ಕುಟುಂಬದ ಪ್ರಮುಖರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಯಾವುದೇ ದಾಖಲೆ ನೀಡದೆ ಮೌಖಿಕವಾಗಿ ಮಾಹಿತಿ ನೀಡಲಾಗಿದೆ. ದಾಖಲೆ ನೀಡಲು ತಾತಪ್ಪ ಕುಟುಂಬದವರು ಎರಡು ದಿನ ಕಾಲಾವಕಾಶ ಕೇಳಿಕೊಂಡಿದ್ದಾರೆ.