ಬೆಳಗಾವಿ: ಕೇವಲ 5000 ರೂಪಾಯಿ ವಿಚಾರಕ್ಕೆ ಸಿಂಗರ್ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳ ಸಮೀಪ ನಡೆದಿದೆ.
ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ಕಾರ್ ಹರಿಸಿ 22 ವರ್ಷದ ಗಾಯಕ ಮಾರುತಿ ಅಡಿವೆಪ್ಪ ಲಟ್ಟೇ ಅವರನ್ನು ಕೊಲೆ ಮಾಡಲಾಗಿದೆ. ಈರಪ್ಪ ಅಕ್ಕಿವಾಟೆ ಸೇರಿದಂತೆ 11 ಜನ ಆರೋಪಿಗಳು ಮಾರುತಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಉತ್ತರ ಕರ್ನಾಟಕದ ಶೈಲಿಯ ಹಾಡುಗಳ ಮೂಲಕ ಮಾರುತಿ ಮನೆ ಮಾತಾಗಿದ್ದರು. ರಾತ್ರಿ ಸ್ನೇಹಿತನ ಜೊತೆ ಬೈಕ್ ನಲ್ಲಿ ಬರುವಾಗ ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರುತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿ ಬಳಿಕ ಕಾರ್ ಹತ್ತಿಸಿದ್ದಾರೆ.
ಆರೋಪಿ ಈರಪ್ಪನ ಬಳಿ ಮಾರುತಿ 50,000 ರೂ. ಸಾಲ ಪಡೆದುಕೊಂಡಿದ್ದು, 45,000 ವಾಪಸ್ ನೀಡಿದ್ದ. ಬಾಕಿ 5 ಸಾವಿರ ರೂಪಾಯಿ ವಿಚಾರಕ್ಕೆ ಕೊಲೆ ಮಾಡಲಾಗಿದೆ.
ಕಬ್ಬು ಕಟಾವು ಕೆಲಸಕ್ಕೆ ಹೋಗದೇ, 5 ಸಾವಿರ ರೂ. ವಾಪಸ್ ಕೊಡದೇ ಇದ್ದ ಕಾರಣಕ್ಕೆ ಮಾರುತಿ ಕೊಲೆ ಮಾಡಲಾಗಿದೆ. ಇತ್ತೀಚೆಗೆ ಮಾರುತಿಗೆ ಹಾಡಿನಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಹಾಡುವುದರಲ್ಲಿ ಬ್ಯುಸಿಯಾಗಿದ್ದ. ಕೆಲಸಕ್ಕೂ ಹೋಗದೆ ಹಣವನ್ನು ಕೊಡದ ಹಿನ್ನೆಲೆಯಲ್ಲಿ ಮಾರುತಿಯನ್ನು ಹತ್ಯೆ ಮಾಡಲಾಗಿದೆ.
ಹತ್ಯೆಯ ನಂತರ ಮಾರುತಿಯ ಮೇಲೆ ಆರೋಪಿಗಳು ಕಾರ್ ಹತ್ತಿಸಿದ್ದಾರೆ. ಈ ವೇಳೆ ಕಾರ್ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದಾರೆ. ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿ ಈರಪ್ಪನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಸಿದ್ದರಾಮ ಒಡೆಯರ್, ಆಕಾಶ್ ಪೂಜಾರಿಯವರನ್ನು ಪೊಲೀಸರು ಬಂಧಿಸಿದ್ದಾರೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸು ದಾಖಲಾಗಿದೆ.