ಚಾಮರಾಜನಗರ: ಪತ್ನಿ ಗರ್ಭಿಣಿಯಾದಳು ಎಂಬ ಕಾರಣಕ್ಕೆ ಕಿರಾತಕನೊಬ್ಬ ಆಕೆಯನ್ನೇ ಹತ್ಯೆಗೈದಿರುವ ಘೋರ ಘಟನೆ ಚಾಮರಾಜನಗರ ತಾಲೂಕಿನ ಡೊಳ್ಳಿಪುರ ಗ್ರಾಮದಲ್ಲಿ ನಡೆದಿದೆ.
ಶುಭಾ ಪತಿಯಿಂದಲೇ ಹತ್ಯೆಯಾದ ಗರ್ಭಿಣಿ. ಮಹೇಶ್ ಗರ್ಭಿಣಿ ಪತ್ನಿಯನ್ನೇ ಕೊಂದ ಆರೋಪಿ. ಜೂನ್ 30ರಂದು ಪತ್ನಿಯನ್ನು ಹೆಚ್.ಡಿ.ಫಾರೆಸ್ಟ್ ನ ಡೊಳ್ಳಿಪುರದಲ್ಲಿ ಹತ್ಯೆ ಮಾಡಿದ್ದ ಹಂತಕ ಪತಿ, ಪೊಲೀಸರಿಗೆ ಖುದ್ದು ಕರೆ ಮಾಡಿ ಯಾರೋ ಪತ್ನಿಯನ್ನು ಹತ್ಯೆಗೈದಿದ್ದಾಗಿ ಹೇಳಿದ್ದಾನೆ.
ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ವಿಚಾರಣೆ ನಡೆಸಿದ ವೇಳೆ ಮನಬಂದಂತೆ ಮಾತನಾಡುತ್ತಿದ್ದ. ಅಲ್ಲದೇ ಆತನ ಶರ್ಟ್ ಮೇಲೆ ರಕ್ತದ ಕಲೆ ಇರುವುದು ಕಂಡು ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಪತಿ ಮಹೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಪತ್ನಿಯನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಪತ್ನಿ ಗರ್ಭಿಣಿಯಾಗಿದ್ದಳು. ಮಹೇಶ್ ಗೆ ಪತ್ನಿ ಗರ್ಭಿಣಿಯಾಗಿದ್ದು ಇಷ್ಟವಾಗಲಿಲ್ಲ. ಮಕ್ಕಳಾಗುವುದು ಇಷ್ಟವಿರಲಿಲ್ಲವಂತೆ. ಆರ್ಥಿಕ ಸಮಸ್ಯೆ ಎಂದು ನೆಪವೊಡ್ಡಿ ಆಗಾಗ ಗಲಾಟೆಮಾಡಿ ಜಗಳವಾಡುತ್ತಿದ್ದನಂತೆ. ಆದರೆ ಪತ್ನಿ ಕೆಲ ದಿನಗಳ ಹಿಂದೆ ತಾನು ಗರ್ಭಿಣಿ ಎಂಬ ವಿಚಾರವನ್ನು ಪತಿಗೆ ಹೇಳಿದ್ದಳು. ಅಲ್ಲದೇ ಮಗುವನ್ನು ಉಳಿಸಿಕೊಳ್ಳಲು ಆಕೆ ಸಾಕಷ್ಟು ಯತ್ನಿಸುತ್ತಿದ್ದಳು. ಇದೇ ಕಾರಣಕ್ಕೆ ಕೋಪಗೊಂಡಿದ್ದ ಪತಿಮಹಾಶಯ ವ್ಯವಸ್ಥಿತವಾಗಿ ಸಂಚುರೂಪಿಸಿ ತೋಟದ ಮನೆಗೆ ಕರೆದೊಯ್ದು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತನಗೇನೂ ಗೊತ್ತಿಲ್ಲ ಎಂದು ಕಥೆ ಕಟ್ಟಿದ್ದಾನೆ. ಆರ್ಥಿಕ ಸಮಸ್ಯೆ ಕಾರಣಕ್ಕೆ ಮಕ್ಕಳಾಗುವುದು ಇಷ್ಟವಿಲ್ಲವೆಂದು ಪತ್ನಿ ಕೊಂದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.