ಹಾಸನ : ಹಾಸನಕ್ಕೆ ಏನಾಗಿದೆ..? ಹೃದಯಾಘಾತದ ಸರಣಿ ಸಾವುಗಳು ಸಂಭವಿಸುತ್ತಿದೆ. ಹೌದು, ಇಂದು ಒಂದೇ ದಿನ ಹೃದಯಾಘಾತಕ್ಕೆ ಮೂವರು ಬಲಿಯಾಗಿದ್ದು, ಕಳೆದ 40 ದಿನಗಳಲ್ಲಿ 21 ಮಂದಿ ಬಲಿಯಾಗಿದ್ದಾರೆ.
1) ಫ್ರೊಫೆಸರ್ ಬಲಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಿವಾಸಿ ಇಂಗ್ಲೀಷ್ ಫ್ರೊಫೆಸರ್ ಒಬ್ಬರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನ ಮುತ್ತ್ಯಯ್ಯ (58) ಎಂದು ಗುರುತಿಸಲಾಗಿದೆ. ಇವರು ಹೊಳೆನರಸೀಪುರದ ಕಾಲೇಜೊಂದರಲ್ಲಿ ಇಂಗ್ಲೀಷ್ ಫ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು.
2) ಹಾಸನದಲ್ಲಿ ಹೃದಯಾಘಾತಕ್ಕೆ ಮಹಿಳೆ ಬಲಿ
ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಲೇಪಾಕ್ಷಿ (51) ಎಂದು ಗುರುತಿಸಲಾಗಿದೆ.ಮನೆಯಲ್ಲಿ ಧಿಡೀರನೇ ಲೇಪಾಕ್ಷಿ ನನಗೆ ಸುಸ್ತು ಆಗುತ್ತಿದೆ ಎಂದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ.
3) ಹೃದಯಾಘಾತದಿಂದ ಯೋಧ ಸಾವು
ರಜೆಗೆ ಎಂದು ಊರಿಗೆ ಬಂದ ಯೋಧ ಜಮೀನಿನಲ್ಲಿ ಉಳುಮೆ ಮಾಡುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯೋಧನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಎಂದು ತಿಳಿದುಬಂದಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಲೋಹಿತ್ ರಜೆಗೆಂದು ಊರಿಗೆ ತೆರಳಿದ್ದಾಗ ಜಮೀನು ಉಳುಮೆ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.