ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ನಡುವೆಯೇ ರಾಮನಗರ ಶಾಸಕ ಇಕ್ಬಾಅಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ನಮ್ಮಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ. ಹೈಕಮಾಂಡ್ ಒಂದೇ. ರಾಜಕಾರಣದಲ್ಲಿ ಬದಲಾವಣೆ ಸಹಜ. ಪಕ್ಷದಲ್ಲಿ ಯಾರಿಗೆ ಸೂಕ್ತ ಎನಿಸುತ್ತೋ ಅವರಿಗೆ ಅಧಿಕಾರ ಸಿಗುತ್ತದೆ ಎಂದಿದ್ದಾರೆ.
ಈ ಸರ್ಕಾರ ಬರ್ವ ಮುನ್ನ ಕಾಂಗ್ರೆಸ್ ಶಾಸಕರ ಸಂಖ್ಯೆ ಎಷ್ಟಿತ್ತು? 136 ಸೀಟು ಬರಲು ಹೋರಾಟ, ಶ್ರಮ, ಆಸಕ್ತಿ ತೋರಿದ್ದು ಯಾರು? ಇದರ ಹಿಂದಿನ ಹೋರಾಟ, ಶ್ರಮ ಯಾರದ್ದೆಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳುವ ಮೂಲಕ ಡಿ.ಕೆ.ಶುವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ದೇಶದಲ್ಲಿ ಭಾರತ್ ಜೋಡೋ ಕಾರ್ಯಕ್ರಮ ಯಾರೂ ಮಾಡಿರಲಿಲ್ಲ. ಮೇಕೆದಾಟು ಪಾದಯಾತ್ರೆಯಂತಹ ಹೋರಾಟ ಯಾರೂ ಮಾಡಿರಲಿಲ್ಲ. ಅಂತಹ ಹೋರಾಟವನ್ನು ಮಾಡಿ, ಪಕ್ಷ ಸಂಘಟನೆಗೆ ಪ್ರಮುಖ ಕಾರಣರಾದವರು ಡಿ.ಕೆ.ಶಿವಕುಮಾರ್. ಮುಂದಿನ ಮೂರು ತಿಂಗಳಲ್ಲಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.