ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಸೇರಿದಂತೆ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ನೆರವು ನೀಡಿದ ಕೂನಪ್ಪನನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 3 ಕ್ಕೇರಿಕೆಯಾಗಿದೆ.
ಮಾದ ಅಲಿಯಾಸ್ ಮಾದುರಾಜು , ನಾಗರಾಜ್, ಹಾಗೂ ಕೂನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ತನ್ನ ಹಸುವನ್ನು ಹುಲಿ ಕೊಂದಿದ್ದಕ್ಕೆ ತಾನೇ ವಿಷ ಹಾಕಿ ಹುಲಿಯನ್ನು ಕೊಂದಿರುವುದಾಗಿ ಮಾದನ ತಂದೆ ಶಿವಣ್ಣ ಹೇಳಿಕೆ ನೀಡಿದ್ದರು. ಪುತ್ರನನ್ನು ರಕ್ಷಿಸುವ ಸಲುವಾಗಿ ತಾನು ಹುಲಿ ಸಾಯಿಸಿದ್ದಾಗಿ ಹೇಳಿದ್ದರು. ಆದರೆ ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಶಿವಣ್ಣನ ಪುತ್ರ ಮಾದ ಅಲಿಯಾಸ್ ಮಾದುರಾಜು ಐದು ಹುಲಿಗಳ ಸಾವಿಗೆ ತಾನು ಕಾರಣ. ತಾನೇ ವಿಷಹಾಕಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮಾದ ಅಲಿಯಾಸ್ ಮಾದಯರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ತಿಂದು ಹಾಕಿತ್ತು. ಇದರಿಂದ ನೊಂದ ಮಾದ ನಾಗರಾಜ್ ಬಳಿ ಹೇಳಿಕೊಂಡಿದ್ದನು. ಆದ್ದರಿಂದ ಇಬ್ಬರು ಹುಲಿ ಕೊಲ್ಲಲು ನಿರ್ಧರಿಸಿದ್ದರು. ಆದ್ದರಿಂದ ಹುಲಿ ಕೊಲ್ಲಲು ಕ್ರಿಮಿನಾಶಕ ತಂದಿಟ್ಟಿದ್ದನು. ನಾಗರಾಜ್ ಮೃತ ಹಸುವಿನ ಕಳೇಬರಕ್ಕೆ ಕ್ರಿಮಿನಾಶಕ ಸುರಿದು ಬಂದಿದ್ದನು. ಇದನ್ನು ತಿಂದ ಹುಲಿಗಳು ಮೃತಪಟ್ಟಿದೆ ಎಂದು ವಿಚಾರಣೆ ವೇಳೆ ಬಯಲಾಗಿದೆ.