ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ತಣ್ಣಗೆ ಬೀಸುತ್ತಿದ್ದು, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಆಗಸ್ಟ್, ಸೆಪ್ಟೆಂಬರ್ ನಲ್ಲಿ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗಲಿದೆ. ಗಾಳಿ ತಣ್ಣಗೆ ಬೀಸುತ್ತಿದೆ… ಸೆಪ್ಟೆಂಬರ್ ಕಳಿಯಲಿ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಲ್ಲಿ ಪವರ್ ಸೆಂಟರ್ ಗಳು ಜಾಸ್ತಿಯಾಗಿವೆ ಎಂದು ಹೇಳಿದ್ದಾರೆ. 2013ರಲ್ಲಿ ಇದ್ದ ಹಾಗೇ ಸಿಎಂ ಸಿದ್ದರಾಮಯ್ಯ ಈಬಾರಿ ಇಲ್ಲ ಎಂಬವಿಚಾರವಾಗಿ ಮಾತನಾಡಿದ ರಾಜಣ್ಣ, ಏನ್ ಮಾಡೋದು ಪವರ್ ಸೆಂಟರ್ ಗಳು ಜಾಸ್ತಿಯಾಗಿವೆ. ಒಂದು, ಎರಡು, ಮೂರು ಹೀಗೆ ಎಷ್ಟುಬೇಕಾದರೂ ಅಂದುಕೊಳ್ಳಬಹುದು. 2013 ರಿಂದ 2018ರವರೆಗೆ ಒಂದೇ ಪವರ್ ಸೆಂಟರ್ ಇತ್ತು. ಹೀಗಾಗಿ ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಆದರೆ ಈಗ ಪವರ್ ಸೆಂಟರ್ ಗಳು ಜಾಸ್ತಿಯಾಗಿವೆ. ಪವರ್ ಸೆಂಟರ್ ಗಳು ಜಾಸ್ತಿಯಾದಷ್ಟೂ ಜಂಜಾಟ, ಒತ್ತಡಗಳು ಜಾಸ್ತಿಯಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಸ್ವತಃ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಅನುದಾನದ ಕೊರತೆಯಿಲ್ಲ. ದುಡ್ದು ಇಲ್ಲದಿದ್ದರೆ ಅನುದಾನ ಕೊಡಲು ಸಾಧ್ಯವೆ? ಶಾಸಕರಿಗೆ ಅವರ ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲ ಎಂಬ ಅಸಮಾಧಾನ ಇರಬಹುದು. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವುದರಿಂದ ಆರ್ಥಿಕ ಹೊರೆ ಸರ್ಕಾರದ ಮೇಲಿದೆ ಎಂದರು.