ಚಿಂತಾಮಣಿ: ಚಿಂತಾಮಣಿ ತಾಲೂಕಿನ ಮೈಲಾಪುರದಲ್ಲಿ ಹಾಡಹಗಲೇ ಕೇಬಲ್ ಕಳವು ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಿಂತಾಮಣಿಯ ನರಸಿಂಹ ಮತ್ತು ಸೈಪುಲ್ಲಾ ಕೇಬಲ್ ಕಳವು ಮಾಡುವಾಗ ಸಿಕ್ಕಿಬಿದ್ದ ಆರೋಪಿಗಳು. ಅನೇಕ ದಿನಗಳಿಂದ ಈ ಭಾಗದಲ್ಲಿ ಬೋರ್ ವೆಲ್ ಕೇಬಲ್ ಕಳುವಾಗುತ್ತಿದ್ದು, ಗ್ರಾಮಸ್ಥರು ಕೇಬಲ್ ಕಳ್ಳರನ್ನು ಹಿಡಿಯಲು ಕಾಯುತ್ತಿದ್ದರು.
ಸೋಮವಾರ ಮೈಲಾಪುರದ ಮಂಜುನಾಥ ಗೌಡರ ಎರಡು ಕೊಳವೆ ಬಾವಿ, ಆನಂದ್, ವೆಂಕಟೇಶ್ ಗೌಡ ಮತ್ತು ಗ್ರಾಮದ ಸಾರ್ವಜನಿಕ ಕೊಳವೆ ಬಾವಿ ಸೇರಿ ಒಟ್ಟು ಐದು ಬೋರ್ವೆಲ್ ಗಳ ಕೇಬಲ್ ಕದ್ದ ಇಬ್ಬರು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ಗ್ರಾಮಸ್ಥರು ಇಬ್ಬರನ್ನು ಥಳಿಸಿ ಗ್ರಾಮಾಂತರ ಠಾಣೆ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ. ಮೈಲಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವರ್ಷದಿಂದ ಬೋರ್ವೆಲ್ ಗಳ ಕೇಬಲ್ ಗಳನ್ನು ಕಳವು ಮಾಡುತ್ತಿದ್ದು ಪೊಲೀಸರಿಗೆ ದೂರು ನೀಡಲಾಗಿತ್ತು ಎನ್ನಲಾಗಿದೆ.