ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಕತ್ತು ಕೊಯ್ದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ರಮೇಶ್(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಿಲ್ಟ್ರಿ ಹೋಟೆಲ್ ನಡೆಸುತ್ತಿದ್ದ ರಮೇಶ್ ಹೋಟೆಲ್ ಪಕ್ಕದಲ್ಲಿ ಇದ್ದ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನಿಗೆ ಕುಡಿತದ ಚಟವಿದ್ದು, ಇದನ್ನು ಬಿಡಿಸಲು ಕುಟುಂಬದವರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಈ ಹಿಂದೆಯೂ ರಮೇಶ್ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಲಾಗಿದೆ.
ಶನಿವಾರ ರಾತ್ರಿ ಹೋಟೆಲ್ ನಲ್ಲಿ ಇದ್ದ ಚಾಕು ತೆಗೆದುಕೊಂಡು ಶೌಚಾಲಯಕ್ಕೆ ಹೋದ ರಮೇಶ್ ಕತ್ತು ಸೀಳಿಕೊಂಡಿದ್ದಾನೆ. ಬಹುಹೊತ್ತಿನವರೆಗೆ ಆತ ಬರದಿದ್ದಾಗ ಕುಟುಂಬದವರು, ಗ್ರಾಮಸ್ಥರು ಹುಡುಕಾಡಿದಾಗ ಶೌಚಾಲಯದಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.