ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ವಾಡಿಕೆ ದಿನಾಂಕಕ್ಕಿಂತ ಮೊದಲೇ ಮುಂಗಾರು ಆರಂಭವಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದ ಮನೆಗಳು, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಪರಿಹಾರ ನೀಡಲು ಸರ್ಕಾರ ಆದೇಶಿಸಿದೆ.
ಈ ಮೊದಲು ನೈರುತ್ಯ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಮಳೆ ಹಾನಿ ಪ್ರಕರಣಗಳಿಗೆ ಷರತ್ತುಗಳನ್ನು ಪಾಲಿಸಿ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಪರಿಹಾರ ಒದಗಿಸಲು ಸರ್ಕಾರ ಆದೇಶಿಸಿತ್ತು.
ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ವಾಡಿಕೆಯ 166 ಮಿ.ಮೀ. ಮಳೆ ಬದಲಿಗೆ 944 ಮಿ.ಮೀ. ಮಳೆಯಾಗಿದೆ. ಮುಂಗಾರು ಮೇ ತಿಂಗಳಲ್ಲೇ ಪ್ರಾರಂಭವಾಗಿದೆ. ಇದರಿಂದ ನೆರೆ, ಭೂಕುಸಿತ, ಪ್ರವಾಹ ಮತ್ತಿತರ ಪ್ರಾಕೃತಿಕ ವಿಕೋಪದಿಂದ ಜೀವ ಹಾನಿ, ಜಾನುವಾರುಗಳ ಪ್ರಾಣಹಾನಿ, ಮನೆ ಹಾನಿ ಉಂಟಾಗಿದೆ. ಈ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ಮೇ 1ರಿಂದಲೇ ಉಂಟಾದ ಮಳೆ ಹಾನಿ ಪರಿಗಣಿಸಿ ಹೆಚ್ಚುವರಿ ಪರಿಹಾರ ಪಾವತಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.