ಹಾಸನ: ಕಬ್ಬಿಣ ತುಂಡರಿಸಿ ಕಳ್ಳತನ ಮಾಡಲು ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಇನ್ನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಎನ್ ಆರ್ ವೃತ್ತದಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಗಾಯಾಳು. ಚಿತ್ರಲಿಂಗೇಶ್ವರದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಸನದ ಎನ್ ಆರ್ ಸರ್ಕಲ್ ನಲ್ಲಿದ್ದಾಗ, ಚೇತು ಅಲಿಯಾಸ್ ಚೇತನ್ ಎಂಬಾತ ಬಂದು ಎಣ್ನೆ ಹೊಡೆಯೋಣ ಎಂದು ಕರೆದುಕೊಂಡು ಹೋಗಿದ್ದಾನೆ. ಎನ್ ಆರ್ ಸರ್ಕಲ್ ನಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕುಡಿಯುತ್ತಾ ಕುಳಿತಿದ್ದಾಗ ಒಂದು ಕಡೆ ಕಬ್ಬಿಣ ಇದೆ ಅದನ್ನು ಇಬ್ಬರೂ ಸೇರಿ ತುಂಡರಿಸಿಕೊಂಡು ಬಂದು ಮಾರಾಟ ಮಾಡೋಣ ಎಂದಿದ್ದಾನೆ. ಅದಕ್ಕೆ ಶಿವಣ್ಣ ನನಗೆ ತಿರುಗಾಡಲು ಆಗಲ್ಲ, ಕಬ್ಬಿಣ ಕತ್ತರಿಸಲು ಆಗಲ್ಲ ಎಂದಿದ್ದಾನಂತೆ.
ಇದರಿಂದ ಕೋಪಗೊಂಡ ಚೇತು, ಬಾರ್ ನಿಂದ ಹೊರಬರುತ್ತಿದ್ದಂತೆ ನಾನು ನಿನಗೆ ಊಟ, ಎಣ್ಣೆ ಕೊಡಿಸಿದ್ದೇನೆ. ಈಗ ನೀನು ಬರಲಿಲ್ಲ ಎಂದರೆ ನಿನ್ನನ್ನು ಮುಗಿಸುತ್ತೇನೆ ಎಂದು ಚಾಕು ತೆಗೆದು ಇರಿದಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಶಿವಣ್ಣನ ಕಣ್ಣು, ಕೈಗಳಿಗೆ ಚಾಕು ತಾಗಿದೆ. ಅಲ್ಲದೇ ಮೊಟೈಕೈಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.