ಬೆಂಗಳೂರು: ಬೆಂಗಳೂರು ಕಾಲ್ತುಳಿತ ಘಟನೆ ನಂತರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಗರಂ ಆಗಿದ್ದಾರೆ.
ಖಾತೆ ಬದಲಾವಣೆ ವಿಚಾರ ವದಂತಿ. ಅದನ್ನು ಹೇಳಿದ್ದು ಯಾರು ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಏನೇ ಇದ್ದರೂ ನನ್ನನ್ನೇ ಕೇಳಬೇಕು ಅಲ್ಲವೇ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪರಮೇಶ್ವರ್, ಒಬ್ಬರ ವ್ಯಕ್ತಿತ್ವ ಕೊಲೆ ಮಾಡಬಾರದು, ಇದು ಶೋಭೆ ತರುವುದಿಲ್ಲ. ನಾನು ಸೌಮ್ಯಮದಿಂದಲೇ ನಡೆದುಕೊಂಡಿದ್ದೇನೆ. ಏನೇ ಇದ್ದರೂ ನನ್ನನ್ನೇ ಕೇಳಿ, ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ನನ್ನ ಪತ್ನಿ ಬಳಿಯೂ ರಾಜಕೀಯ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಖಾತೆ ಬದಲಾಯಿಸಿ ಎಂದು ಸಿಎಂ ಹೇಳಿದ್ದಾರೆ ಎಂದಿದ್ದಾರೆ ಎಂದು ಹೇಳಬೇಡಿ, ದಯವಿಟ್ಟು ಈ ರೀತಿ ಮಾಡಬೇಡಿ. ನಮ್ಮ ಅಭಿಮಾನಿಗಳು, ಮತದಾರರು ಏನು ತಿಳಿದುಕೊಳ್ಳುತ್ತಾರೆ? ಇಂತಹ ಖಾತೆಯೇ ಬೇಕು ಎಂದು ನಾನು ಯಾವತ್ತೂ ಕೇಳಿಲ್ಲ. ಬೆಂಗಳೂರು ಘಟನೆಯಿಂದ ನಾವು ನೋವು ಅನುಭವಿಸುತ್ತಿದ್ದೇವೆ. ಇದು ಸವಾಲು, ಇದನ್ನು ಎದುರಿಸಬೇಕು. ಖಾತೆ ಬದಲಾವಣೆಯ ಬಗ್ಗೆ ನಾನು ಸಿಎಂ ಬಳಿ ಹೇಳಿಕೊಂಡಿಲ್ಲ. ಇದು ಸತ್ಯಕ್ಕೆ ದೂರವಾದುದು, ಇದು ಸುಳ್ಳು ಎಂದು ಪರಮೇಶ್ವರ್ ಹೇಳಿದ್ದಾರೆ.