ತುಮಕೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದು, ಈ ಪೈಕಿ ತುಮಕೂರಿನ ವಿದ್ಯಾರ್ಥಿ ಮನೋಜ್ ಕೂಡ ಒಬ್ಬರು. ಕಾಲ್ತುಳಿತ ದುರಂತದಲ್ಲಿ ಮನೋಜ್ ಸಾವನ್ನಪ್ಪಿದ್ದರು. ಇದರಿಂದ ತಂದೆ ದೇವರಾಜ್ ಹಾಗೂ ತಾಯಿಗೆ ಭರಸಿಡಿಲು ಬಡಿದಂತಾಗಿತ್ತು. ಇದೀಗ ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ.
ತುಮಕೂರಿನ ದೇವರಾಜ್ ಕುಂಟುಂಬಕ್ಕೆ ಆಘಾತದ ಮೇಲೆ ಆಘಾತ ಎದುರಾಗಿದೆ. ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ನೋವಲ್ಲಿದ್ದ ದೇವರಾಜ್ ಅವರಿಗೆ ಇದೀಗ ಅವರ ತಾಯಿ ದೇವಿರಮ್ಮ ಕೂಡ ಮೃತಪಟ್ಟಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ದೇವಿರಮ್ಮ ಮೊಮ್ಮಗ ಮನೋಜ್ ಸಾವಿನ ಸುದ್ದಿ ತಿಳಿದಾಗಿನಿಂದ ಊಟವನ್ನೇ ಬಿಟ್ಟಿದ್ದರು. ಯಾರು ಎಷ್ಟೇ ಹೇಳಿದರೂ ಊಟ ಮಾಡುತ್ತಿರಲಿಲ್ಲ. ಮನೋಜ್ ಸಾವಿನಿಂದ ತೀವ್ರವಾಗಿ ನೊಂದಿದ್ದರು. ಇದರಿಂದ ಇನ್ನಷ್ಟು ಆರೋಗ್ಯ ಸ್ಥಿತಿ ಗಂಭಿರವಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ದೇವೀರಮ್ಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇನ್ನೊಂದೆಡೇ ಮನೋಜ್ ತಾಯಿ ಕೂಡ ಅನಾರೋಗ್ಯಕ್ಕೀಡಾಗಿದ್ದಾರೆ. ದೇವರಾಜ್ ಅವರಿಗೆ ಒಂದೆಡೆ ಮಗನನ್ನು ಕಳೆದುಕೊಂಡಿರುವ ಶಾಕ್. ಮತ್ತೊಂದೆಡೆ ತಾಯಿಯೂ ಅಗಲಿದ್ದು, ನೋವಿಂದ ಹೊರಬರಲಾಗದೇ ಕಂಗಾಲಾಗಿ ಕುಳಿತಿದ್ದಾರೆ.