ಬೆಂಗಳೂರು: ಚೀಟಿ ಹೆಸರಲ್ಲಿ ದಂಪತಿ ಇಡೀ ಏರಿಯಾದ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ರಾತ್ರಿ ಬೆಳಗಾಗುವಷ್ಟರಲ್ಲಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ನಡೆದಿದೆ.
ಸುಧಾ ಹಾಗೂ ಸಿದ್ದಪ್ಪಾಜಿ ಎಂಬ ದಂಪತಿ ಚೀಟಿ ವ್ಯವಹಾರದ ಹೆಸರಲ್ಲಿ ಜನರಿಗೆ ಮೋಸ ಮಾಡಿ ನಾಪತ್ತೆಯಾಗಿದ್ದಾರೆ. ದಂಪತಿಯನ್ನು ನಂಬಿ ಹಣ ಕೊಟ್ಟವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸುಧಾ ಹಾಗೂ ಸಿದ್ದಪ್ಪಾಜಿ ದಂಪತಿ 5, 10 ಲಕ್ಷ ರೂಪಯಿವರೆಗೆ ಚೀಟಿ ವ್ಯವಹಾರ ನಡೆಸುತ್ತಿದ್ದರು. 5 ಲಕ್ಷದ ಚೀಟಿಗೆ ತಿಂಗಳಿಗೆ 12,500, 10 ಲಕ್ಷದ ಚೀಟಿಗೆ 25 ಸಾವಿರೂ ಕಟ್ಟಿಸಿಕೊಳ್ಳುತ್ತಿದ್ದರು. ಆರಂಭದಲ್ಲಿ ಕೆಲವರಿಗೆ ಹಣವನ್ನು ನೀಡಿ ದಂಪತಿ ನಂಬಿಕೆ ಗಿಟ್ಟಿಸಿಕೊಂಡಿದ್ದರು. ದಂಪತಿಯನ್ನು ನಂಬಿ ಹಣ ಹಾಕಿದರೆ ಮೋಸ ಮಾಡಲ್ಲ. ತೊಂದರೆ ಇದ್ದಾಗ ಪಡೆಯಬಹುದು ಎಂದು ಹೇಳಿ ಜರಗನಹಳ್ಳಿ ಜನರು ಲಕ್ಷ ಲಕ್ಷ ಹಣ ಕೊಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರಿಂದ ಹಣ ಪಡೆದ ದಂಪತಿ ಯಾರಿಗೂ ಹೇಳದೇ ಕೇಳದೇ ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಮೋಸ ಹೋದ ಜನರು ಸಿದ್ದಪ್ಪಾಜಿ ದಂಪತಿ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.