ಬೆಂಗಳೂರು: ಅನೇಕ ಬಾರಿ ಮುಂದೂಡಲ್ಪಟ್ಟಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ(ಜಾತಿಗಣತಿ) ಜಾರಿ ಕುರಿತಾಗಿ ಚರ್ಚಿಸಲು ಜೂನ್ 12 ರಂದು ವಿಶೇಷ ಸಂಪುಟ ಸಭೆ ಕರೆಯಲಾಗಿದೆ.
ಏಪ್ರಿಲ್ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾದ ಜಾತಿಗಣತಿ ವರದಿ ಬಗ್ಗೆ ನಂತರ ನಡೆದ ಸಚಿವ ಸಂಪುಟ ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಇದುವರೆಗೆ ಸೂಕ್ತ ತೀರ್ಮಾನ ಕೈಗೊಂಡಿಲ್ಲ. ಮೇ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಚರ್ಚೆಗೆ ಬಂದಿದ್ದು, ಕೆಲವು ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಸಿಲ್ಲ. ಕೆಲವು ಸಚಿವರು ಒಂದೇ ಅಭಿಪ್ರಾಯ ಹೊಂದಿದ ಪತ್ರಕ್ಕೆ ಸಾಮೂಹಿಕವಾಗಿ ಸಹಿ ಹಾಕಿದ್ದಾರೆ ಎನ್ನುವ ಕಾರಣಕ್ಕೆ ವಿಷಯ ಮುಂದೂಡಲಾಗಿತ್ತು.
ಜೂನ್ 5 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವಿಚಾರ ಪಟ್ಟಿಯಲ್ಲಿದ್ದರೂ, ಚರ್ಚೆ ನಡೆಸದೇ ವಿಷಯವನ್ನು ಮುಂದೂಡಲಾಗಿತ್ತು. ಜೂನ್ 12 ರಂದು ಜಾತಿ ಗಣತಿ ವಿಚಾರವಾಗಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಜೂನ್ 19ರಂದು ನಂದಿ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ನಂದಿ ಬೆಟ್ಟದ ಮಯೂರ ಸಭಾಂಗಣದಲ್ಲಿ ಜೂನ್ 19ರಂದು ಮಧ್ಯಾಹ್ನ 12 ಗಂಟೆಗೆ ಸಂಪುಟ ಸಭೆ ಕರೆಯಲಾಗಿದೆ. ಈ ಮೊದಲು ಕಲಬುರಗಿ ಹಾಗೂ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಲಾಗಿತ್ತು.