ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ನಗರದ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಂದಾಯ ಇಲಾಖೆಯ ಐವರು ನೌಕರರ ವಿರುದ್ಧ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿನಿ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಸಹಾಯಕ ಮತ್ತು ನಾಲ್ವರು ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಸಿಂಧನೂರು ನಗರ ಶಹರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮಗಳ ಮದುವೆಗಾಗಿ ಜಮೀನಿನ ಮೇಲೆ ಪಡೆದಿದ್ದ ನಾಲ್ಕು ಲಕ್ಷ ರೂಪಾಯಿ ಸಾಲದ ಹಣವನ್ನು ವಾಪಸ್ ಕೊಡಲು ಎಪಿಎಂಸಿಯ ಖಾಸಗಿ ಕೋಣೆಗೆ ಹೋದ ಸಂದರ್ಭದಲ್ಲಿ ಐವರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.
ನನ್ನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಇದೆ. ಮಿನಿ ವಿಧಾನಸೌಧ ಕಚೇರಿಯ ಕಿರಿಯ ಸಹಾಯಕ ರಾಜಭಕ್ಷಿ, ಗ್ರಾಮ ಆಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ ಗಡೇದ್, ಬಂದೇನವಾಜ್ ನಿಡಗುಂದಿ, ಮೃತ್ಯುಂಜಯ, ಆನಂದ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಆರೋಪಿಗಳು ಜಮೀನು ಖರೀದಿ ಕರಾರು ಪತ್ರ ಬರೆಸಿಕೊಂಡು ಸಾಲ ನೀಡಿದ್ದರು. ಅವರು ಸರ್ಕಾರಿ ಉದ್ಯೋಗದಲ್ಲಿದ್ದರೂ ಕರಾರು ಪತ್ರದಲ್ಲಿ ತಮ್ಮ ಉದ್ಯೋಗ ಕೃಷಿ ಎಂದು ನಮೂದಿಸಿದ್ದರು. ಆರೋಪಿಗಳಿಂದ ಪಡೆದಿದ್ದ 4 ಲಕ್ಷ ಮರುಪಾವತಿ ಮಾಡಲು ಹೋದಾಗ ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.