ಬೆಂಗಳೂರು: ಕೆಲಸಕ್ಕೆ ಸೇರಿದ ಮೊದಲ ದಿನವೇ ಕಾರ್ಖಾನೆಯ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ದಾಬಸ್ ಪೇಟೆಯಲ್ಲಿ ನಡೆದಿದೆ.
ಇಲ್ಲಿನ ಸೋಂಪುರ ಕೈಗಾರಿಕಾ ಪ್ರದೇಶದ ಟಿ.ಡಿ.ಪವರ್ ಸಿಸ್ಟಮ್ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ. ರಾಯಚೂರು ಮೂಲದ ಪರಶುರಾಮ್ (27) ಮೃತ ದುರ್ದೈವಿ.
ನಿರಂತರ ಮಳೆಯಿಂದಾಗಿ ಕಾರ್ಖಾನೆಯ ಮೇಲ್ಛಾವಣಿ ಸೋರುತ್ತಿತ್ತು. ಕಟ್ಟಡದ ಮೇಲೆ ತೆರಳಿ ಶೀಟ್ ಸರಿಪಡಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಪರಶುರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಪರಶುರಾಮ್ ಇಂದಷ್ಟೇ ಕೆಲಸಕ್ಕೆ ಸೇರಿದ್ದರು. ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.