ಯಾದಗಿರಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಧರ್ಮ ಕೇಳಿ ಹತ್ಯೆ ಮಾಡಿಲ್ಲ ಎನ್ನುವ ಅರ್ಥ ಬರುವ ರೀತಿ ಹೇಳಿಕೆ ನೀಡಿದ್ದ ಮೃತ ಭರತ್ ಪತ್ನಿಯ ಹೇಳಿಕೆಯ ವಿಡಿಯೋ ತುಣುಕನ್ನು ಸ್ಟೇಟಸ್ ಹಾಕಿಕೊಂಡಿದ್ದ ವ್ಯಕ್ತಿಯ ಎಗ್ ರೈಸ್ ಅಂಗಡಿಯನ್ನು ಯುವಕರ ಗುಂಪು ಧ್ವಂಸ ಮಾಡಿದೆ.
ಯಾದಗಿರಿ ಜಿಲ್ಲೆಯ ರಾಜನಕೋಳೂರು ಗ್ರಾಮದ ಮೀರ್ ಸಾಬ್ ಸೇರಿದಂತೆ ಮೂವರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ರಾಜನಕೋಡೂರು ಗ್ರಾಮದ ಕೆಲವು ಯುವಕರು ಶನಿವಾರ ರಾತ್ರಿ ಎಗ್ ರೈಸ್ ಗಾಡಿಯನ್ನು ಧ್ವಂಸ ಮಾಡಿದ್ದಾರೆ.
ರಾಜನಕೋಳೂರು ಗ್ರಾಮದ ಹೆದ್ದಾರಿ ಪಕ್ಕದಲ್ಲಿ ಮೀರ್ ಸಾಬ್ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ. ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ. ದೊಡ್ಡವರು ಇದನ್ನು ನೋಡಿ ತಿಳಿದುಕೊಳ್ಳಿ ಎಂಬ ವಾಕ್ಯಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪೋಸ್ಟ್ ಹಾಕಿದ್ದ. ಉಳಿದವರು ಇದನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು.