ಹಾವೇರಿ : ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆದ್ದಿದೆ ಎನ್ನುವುದು ಹೆಮ್ಮೆಯ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹಾವೇರಿ ಜಿಲ್ಲೆಯಲ್ಲಿ 650 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜನಾರ್ಪಣೆಗೊಳಿಸಿ, ನೂತನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆಂಬ ಭರವಸೆ ಇದೆ.
ನೀವು ನಮಗೆ, ಈ ಸರ್ಕಾರಕ್ಕೆ ಕೊಟ್ಟ ಮತಗಳ ಘನತೆಯನ್ನು ನಾವು ಎತ್ತಿಹಿಡಿದಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ.
ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿದೆ ಎಂದು ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಹಸಿ ಹಸಿ ಸುಳ್ಳು ನಂಬಬೇಡಿ. ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಗಾತ್ರ 38 ಸಾವಿರ ಕೋಟಿ ಹೆಚ್ಚಾಗಿದೆ. ಮಾತ್ರವಲ್ಲ ಈ ಬಾರಿ ಬಂಡವಾಳ ವೆಚ್ಚ 83 ಸಾವಿರ ಕೋಟಿ ತೆಗೆದಿರಿಸಿದ್ದೀವಿ. ಕಳೆದ ವರ್ಷಕ್ಕಿಂತ 31 ಸಾವಿರ ಕೋಟಿ ಬಂಡವಾಳ ವೆಚ್ಚ ಹೆಚ್ಚಾಗಿದೆ. ಇದಲ್ಲದೆ ಹೆಚ್ಚುವರಿವಾಗಿ 50 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳಿಗೆ ತೆಗೆದಿಟ್ಟಿದ್ದೇವೆ. ಒಟ್ಟು ಒಂದು ಲಕ್ಷದ 33 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ತೆಗೆದಿಟ್ಟಿದ್ದೀವಿ.
ಆರ್.ಅಶೋಕ, ವಿಜಯೇಂದ್ರ ಈಗ ನಮ್ಮ ಸರ್ಕಾರದ ವಿರುದ್ಧ ನಕಲಿ ಜನಾಕ್ರೋಶ ಸಭೆ ನಡೆಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು.
ಜನರ ಆಕ್ರೋಶ ಇರುವುದು ಬಿಜೆಪಿ ಮೇಲೆ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಎನ್ನುವುದನ್ನು ಆರ್.ಅಶೋಕ್, ವಿಜಯೇಂದ್ರ ಅರ್ಥ ಮಾಡಿಕೊಳ್ಳಲಿ.ಶಾಸಕ ಶ್ರೀನಿವಾಸ್ ಮಾನೆಯವರು ಕ್ಷೇತ್ರಕ್ಕೆ ಮಾಡಿರುವ ಕೆಲಸ ಪ್ರತಿಯೊಬ್ಬರಿಗೂ ಕಾಣುತ್ತಿದೆ. ಮುಂದೆ ಅವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯ ಇದೆ. ಕ್ಷೇತ್ರದ ಜನರು ಮಾನೆಯವರ ಜೊತೆ ಸದಾ ನಿಲ್ಲಬೇಕೆಂದು ಮನವಿ ಮಾಡುತ್ತೇನೆ ಎಂದರು.