ರಾಯಚೂರು: ತಂದೆಯೇ ಮಗಳನ್ನು ಹತ್ಯೆ ಮಾಡಿ ಶವವನ್ನು ಮೂಟೆ ಕಟ್ಟಿ ಕೃಷ್ಣಾ ನದಿಗೆ ಎಸೆದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹೆಂಚಿನಾಳ ಗ್ರಾಮದಲ್ಲಿ ನಡೆದಿದೆ.
ಲಕ್ಕಪ್ಪ ಎಂಬಾತ ತನ್ನ ಮಗಳು ರೇಣುಕಾ (18)ಳನ್ನು ಕೊಲೆ ಮಾಡಿ ಬಳಿಕ ನದಿಗೆ ಎಸೆದಿದ್ದಾನೆ. 2024 ಸೆಪ್ಟೆಂಬರ್ 29ರಂದು ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.
ಯುವಕನೊಬ್ಬನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಲಕ್ಕಪ್ಪ ನ್ಯಾಯಾಲಯದಲ್ಲಿ ಸತ್ಯ ವಿಚಾರ ಹೇಳಿದ್ದು, ಮಗಳನ್ನು ತಾನೇ ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಮಗಳು ರೇಣುಕಾಳಿಗೆ 17 ವರ್ಷವಿದ್ದಾಗ ಗ್ರಾಮದ ಅನ್ಯಜಾತಿಯ ಯುವಕ ಹನುಮಂತನನ್ನು ಪ್ರೀತಿಸುತ್ತಿದ್ದಳು. ಮದುವೆಗೆ ಕುಟುಂಬದವರು ವಿರೋಧಿಸಿದ್ದರು. ಈ ವೇಳೆ ಇಬ್ಬರೂ ಗ್ರಾಮ ಬಿಟ್ಟು ಓಡಿ ಹೋಗಿದ್ದರು. ರೇಣುಕಾ ತಂದೆ ಲಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ನಿದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹನುಮಂತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಿದ್ದರು. ಅಲ್ಲದೇ ಹನುಮಂತ ಜೈಲು ಸೇರಿದ್ದ. ಹೀಗೆ ಜೈಲು ಸೇರಿದ ಹನುಮಂತ ಕೆಲ ದಿನಗಳಲ್ಲಿ ಜಮೀನು ಪಡೆದು ಬಿಡುಗಡೆಯಾಗಿದ್ದ.
ಜೈಲಿನಿಂದ ಬಿಡುಗಡೆಯಾಗಿ ಬಂದ ಹನುಮಂತನ ಜೊತೆಯೇ ಮತ್ತೆ ರೇಣುಕಾ ಓಡಾಡಿಕೊಂಡಿದ್ದಳು. ಮನೆಯವರು ಎಷ್ಟೇ ಬುದ್ಧಿ ಹೇಳಿದರೂ ತಾನು ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಕೋಪದ ಬರದಲ್ಲಿ ಲಕ್ಕಪ್ಪ ತನ್ನ ಮಗಳನ್ನೇ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಶವವನ್ನು ಮೂಟೆಯಲ್ಲಿ ಕಟ್ಟಿ ಕೃಷ್ಣಾ ನದಿಗೆ ಬಿಸಾಕಿದ್ದನಂತೆ. ಇದೀಗ ಆರೋಪಿ ಲಕ್ಕಪ್ಪ ನ್ಯಾಯಾಲಯದ ಮುಂದೆ ಬಾಯ್ಬಿಟ್ಟಿದ್ದಾನೆ.