ಬೆಂಗಳೂರು: ಸಿಇಟಿ ಜನಿವಾರ ಪ್ರಕರಣದಿಂದ ಪರೀಕ್ಷೆ ವಂಚಿತನಾದ ಅಭ್ಯರ್ಥಿಗೆ ಎರಡು ಆಯ್ಕೆ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಬೀದರ್ ನಲ್ಲಿ ಜನಿವಾರ ಹಾಕಿದ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಇದ್ದುದರಿಂದ ಒಂದು ವಿಷಯದ ಪರೀಕ್ಷೆಯಿಂದ ಸುಚಿವ್ರತ್ ಕುಲಕರ್ಣಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಥವಾ ಹಾಲಿ ಬರೆದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ಪಡೆಯುವ ಅಂಕದ ಆಧಾರದ ಮೇಲೆ ನೀಡುವ ಗಣಿತ ವಿಷಯದ ಅಂಕ ನಿಗದಿ ಮಾಡುವ ಆಯ್ಕೆ ನೀಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು, ಪರೀಕ್ಷೆ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ರಚಿಸಿದ್ದ ಸಮಿತಿ ವರದಿ ನೀಡಿದೆ. ಬೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಅಂಕಗಳನ್ನು ಆಧರಿಸಿ ರ್ಯಾಂಕ್ ನೀಡಲು ಶಿಫಾರಸು ಮಾಡಿದೆ. ಆದರೆ, ಅನವಶ್ಯಕ ವಿವಾದ ಸೃಷ್ಟಿಸುವ ಬದಲಾಗಿ ವಿದ್ಯಾರ್ಥಿಗೆ ಪರೀಕ್ಷೆಯ ಆಯ್ಕೆ ನೀಡಲಾಗಿದೆ. ಈ ಎರಡು ಆಯ್ಕೆಗಳಲ್ಲಿ ಒಂದನ್ನು ವಿದ್ಯಾರ್ಥಿ ಸ್ವೀಕರಿಸಿದ ನಂತರ ರ್ಯಾಂಕ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಿಇಟಿ ಫಲಿತಾಂಶ ನೀಡಲು ಇನ್ನು ಸಾಕಷ್ಟು ಸಮಯವಿದ್ದು, ರ್ಯಾಂಕ್ ಗೆ ಸಿಇಟಿಯಲ್ಲಿ ಪಡೆದ ಅಂಕಗಳಲ್ಲಿ ಶೇಕಡ 50 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಶೇಕಡ 50 ಅಂಕಗಳನ್ನು ಸಮೀಕರಿಸಿ ರ್ಯಾಂಕ್ ನೀಡಲಾಗುವುದು.