ಬೆಂಗಳೂರು : ಹಣ ಹೂಡಿಕೆಯಿಂದ ಅಧಿಕ ಲಾಭ ಮಾಡಬಹುದು ಎಂದು ಆಮಿಷವೊಡ್ಡಿದ ಖದೀಮ ವ್ಯಕ್ತಿಯೋರ್ವರಿಂದ 65.51 ಲಕ್ಷ ಹಣ ಎಗರಿಸಿದ್ದಾನೆ.
ಬನಶಂಕರಿಯ ಮಂಜುನಾಥ್ ಎಂಬುವವರು ವಂಚನೆಗೆ ಒಳಗಾದವರು. ಸದ್ಯ ಇವರು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ..?
ಮಂಜುನಾಥ್ ಅವರ ವಾಟ್ಸಾಪ್ ಗೆ ವ್ಯಕ್ತಿಯೋರ್ವ ಕಂಪನಿಯೊಂದರ ಹೆಸರಿನಲ್ಲಿ ಹಣ ಹೂಡಿಕೆ ಮಾಡುವ ಸಂದೇಶ ಕಳುಹಿಸಿದ್ದಾನೆ. ಮಂಜುನಾಥ್ ಲಿಂಗ್ ತೆರೆದಾಗ ನೋಂದಣಿ ಮಾಡಿಕೊಳ್ಳುವಂತೆ ಮತ್ತೊಂದು ಲಿಂಕ್ ಕಳುಹಿಸಲಾಗಿದೆ. ಅಪರಿಚಿತರು ಸೂಚಿಸಿದಂತೆ ಅಪ್ಲಿಕೇಶನ್ ಒಂದನ್ನ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ವೇಳೆ ಖದೀಮರು ನಮ್ಮ ಕಂಪನಿಯಲ್ಲಿ ಆ್ಯಪ್ ಮೂಲಕ ಹಣ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರಲಿದೆ ಎಂದು ಆಮಿಷವೊಡ್ಡಿದ್ದಾರೆ. ಇದನ್ನು ನಂಬಿದ ಮಂಜುನಾಥ್ ವಿವಿಧ ಬ್ಯಾಂಕ್ ಖಾತೆಗಳಿಗೆ 65 ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆ್ಯಪ್ ನಲ್ಲಿ 1 ಕೋಟಿ ಲಾಭ ಬಂದಿದೆ ಎಂದು ಹೇಳಿದ್ದಾರೆ. ಮಂಜುನಾಥ್ ಲಾಭದ ಹಣ ಕೇಳುತ್ತಿದ್ದಂತೆ ಅಪರಿಚಿತರು ಸಂಪರ್ಕ ಕಡಿದುಕೊಂಡಿದ್ದಾರೆ.