ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಗಳು ಕಾಣೆಯಾಗಿವೆ.
ಈ ಬಗ್ಗೆ ವ್ಯವಸ್ಥಾಪಕ ರಮೇಶ್ ಹುಲಮನಿ ಅವರು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಸುಮಾರು ಎಂಟು ತಿಂಗಳಿಂದ ಮಠದ ಪೀಠಾಧಿಪತಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿಯವರು ಹಿಂದಿನ ಚಾತುರ್ಮಾಸ ಹಾಗೂ ನಂತರದ ದಿನಗಳಲ್ಲಿ ಅನಾರೋಗ್ಯದ ನಿಮಿತ್ತ ದಾವಣಗೆರೆ ಶಾಖಾ ಮಠ ಮತ್ತು ಬೆಂಗಳೂರಿನಲ್ಲಿ ವಾಸವಾಗಿದ್ದರು.
ಈ ನಡುವೆ ಸ್ವಾಮೀಜಿಯವರ ಖಾಸಗಿ ಬಳಕೆಯ ದಾಸ್ತಾನು ಕೊಠಡಿ ಬೀಗ ಒಡೆದು ಪಾದುಕೆ ಮತ್ತು ಶ್ರೀ ಮುದ್ರೆಗಳನ್ನು ಕಳವು ಮಾಡಲಾಗಿದೆ. ಶ್ರೀಗಳು ಎಂಟು ತಿಂಗಳಿಂದ ದಾವಣಗೆರೆಯ ಶಾಖಾ ಮಠದಲ್ಲಿ ಇದ್ದ ಕಾರಣ ಮಠದಲ್ಲಿ ನಡೆದ ಯಾವುದೇ ಆಗು ಹೋಗುಗಳು ಅವರ ಗಮನಕ್ಕೆ ಬಂದಿರಲಿಲ್ಲ. ಚಾತುರ್ಮಾಸ್ಯ ಕಾರ್ಯಕ್ರಮದ ನಿಮಿತ್ತ ಜುಲೈ 20ರಂದು ಶ್ರೀಗಳು ಮಠಕ್ಕೆ ಬಂದು ಬೀರುವಿನ ಬೀಗ ತೆಗೆಸಿ ನೋಡಿದಾಗ ಪಾದುಕೆಗಳು ಮತ್ತು ಬೆಳ್ಳಿಯ ಶ್ರೀ ಮುದ್ದೆಗಳು ಕಾಣೆಯಾಗಿರುವುದು ಕಂಡುಬಂದಿದೆ ಎಂದು ದೂರು ನೀಡಲಾಗಿದೆ.