ಬೆಂಗಳೂರು: ಕಳೆದ ಐದು ವರ್ಷಗಳಿಂದ ನೇಮಕಾತಿ ಹಗರಣ ಸೇರಿ ವಿವಿಧ ಕಾರಣದಿಂದ ಕಳೆ ತಿಂಗಳ ಹಿಂದೆಯಷ್ಟೇ ಪ್ರಾರಂಭವಾಗಿದ್ದ 545 ಪಿಎಸ್ಐ ಅಂತಿಮ ಹಂತದ ನೇಮಕಾತಿ ಪ್ರಕ್ರಿಯೆಗೆ ಕೆಎಟಿ ಮತ್ತೆ ತಡೆಯಾಜ್ಞೆ ನೀಡಿದೆ.
ಕಳೆದ ಆಗಸ್ಟ್ 25ರಂದು ಹೊರಟಿಸಿದ್ದ 545 ಪಿಎಸ್ಐ ನೇಮಕಾತಿ ಅಂತಿಮ ಆಯ್ಕೆ ಪಟ್ಟಿ ಆದೇಶಕ್ಕೆ ಕೆಎಟಿ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ವಿಭಾಗದ ಡಿಜಿಪಿ ರಾಜ್ಯದ ಎಲ್ಲಾ ಪೊಲೀಸ್ ಕಚೇರಿಗಳಿಗೆ ಶನಿವಾರ ತುರ್ತು ಸಂದೇಶ ರವಾನಿಸಿದ್ದಾರೆ.
ಪೊಲೀಸ್ ನೇಮಕಾತಿ ವಿಭಾಗದಿಂದ ಹೊರಡಿಸಿದ್ದ ಅಂತಿಮ ಆಯ್ಕೆ ಪಟ್ಟಿ ರದ್ದುಪಡಿಸುವಂತೆ ಕೋರಿ ಬಿ. ತೇಜಸ್ ಸೇರಿದಂತೆ ಇತರೆ ಅಭ್ಯರ್ಥಿಗಳು ಕಳೆದ ತಿಂಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಬೆಂಗಳೂರು ಪ್ರಧಾನ ಪೀಠ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ನಿಗದಿಪಡಿಸಿ ಆದೇಶಿಸಲಾಗಿದೆ.