ವಿಜಯಪುರ: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ದೋಚುವ ಪ್ರಕರಣ ಮುಂದುವರೆದಿದೆ. ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ 52.26 ಕೋಟಿ ರೂಪಾಯಿ ಮೌಲ್ಯದ 58 ಕೆಜಿ 976 ಚಿನ್ನಾಭರಣ, 5.20 ಲಕ್ಷ ರೂಪಾಯಿ ನಗದು ದೋಚಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೇ 23 ರಂದು ಕೃತ್ಯ ನಡೆದಿರುವ ಶಂಕೆ ಇದ್ದು, ಇದುವರೆಗೂ ಕಳ್ಳರು ಪತ್ತೆಯಾಗಿಲ್ಲ. ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣ ಇದಾಗಿದೆ. ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಕಲ್ಮೇಶ ಪೂಜಾರಿ ಅವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಿಗಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 23 ರಂದು ಸಂಜೆ 6 ಗಂಟೆಯಿಂದ ಮೇ 25ರ ಬೆಳಗ್ಗೆ 11:30 ಅವಧಿಯಲ್ಲಿ ಕೃತ್ಯ ನಡೆದಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೇ 23 ರಂದು ಆರರಿಂದ ಎಂಟು ಜನರ ತಂಡ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾರಿ ದರೋಡೆ ನಡೆಸಿದೆ. ಬ್ಯಾಂಕಿನ ಪ್ರವೇಶ ದ್ವಾರದ ಬೀಗ ಒಡೆದು ಒಳ ನುಗ್ಗಿ ಬಳಿಕ ಸೈರನ್ ಆಫ್ ಮಾಡಲಾಗಿದೆ. ನಕಲಿ ಕೀ ಬಳಸಿ ಲಾಕರ್ ತೆಗೆದು ಚಿನ್ನ, ನಗದು ಲೂಟಿ ಮಾಡಿ ದರೋಡೆಕೋರರು ಪರಾರಿಯಾಗಿದ್ದಾರೆ. ಬ್ಯಾಂಕಿನ ಸಿಸಿ ಕ್ಯಾಮೆರಾ ಆಫ್ ಮಾಡಿ ಎನ್ವಿಆರ್ ಹೊತ್ತುಕೊಂಡು ಹೋಗಿದ್ದಾರೆ. ಹಣದ ಮೌಲ್ಯದ ಲೆಕ್ಕಾಚಾರದಲ್ಲಿ ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಚಿನ್ನದ ದರೋಡೆ ಪ್ರಕರಣ ಎಂದು ಹೇಳಲಾಗಿದೆ.