ಲಖನೌ: ತನ್ನ ಪ್ರೇಯಸಿಯನ್ನು ಬೇರೊಬ್ಬನೊಂದಿಗೆ ಮದುವೆ ಮಾಡುತ್ತಿದ್ದಾರೆ ಎಂದು ತಿಳಿದ ಪ್ರಿಯಕರ ಮದುವೆ ತಪ್ಪಿಸಲು ಓಡೋಡಿ ಬರುತ್ತಿದ್ದಂತೆ ಆತನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿದ ಯುವತಿಯ ಕುಟುಂಬದ ಕಡೆಯವು, ದೊಣ್ಣೆಯಿಂದ ಹೊಡೆದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ.
ಉತ್ತರಪ್ರದೇಶದ ಪರ್ಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರವಿ ಕೊಲೆಯಾದ ಯುವಕ. ಪಿಂಟು ರವಿಯನ್ನು ಹೊಡೆದುಕೊಂದ ಯುವತಿಯ ಚಿಕ್ಕಪ್ಪ. ಮದುವೆ ನಡೆಯುತ್ತಿದ್ದ ಜಾಗಕ್ಕೆ ಯುವಕ ಬರುತ್ತಿದಂತೆ ಆತನನ್ನು ಹಿಡಿದು ಯುವತಿಯ ಕುಟುಂಬದವರು ಮರಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ಯುವತಿಯ ಚಿಕ್ಕಪ್ಪ ಪಿಂಟು ಯುವಕನನ್ನು ಮನಬಂದಂತೆ ಹೊಡೆದಿದ್ದಾನೆ. ತೀವ್ರ ಅಸ್ವಸ್ಥನಾದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಯುವಕ ಸಾವನ್ನಪ್ಪುತ್ತಿದ್ದಂತೆ ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಚಿಕ್ಕಪ್ಪ ಪಿಂಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರಿಯತಮ ರವಿಯನ್ನು ಕುಟುಂಬದವರು ಹೊಡೆದುಕೊಂದ ವಿಷಯ ತಿಳಿಯುತ್ತಿದ್ದಂತೆ ಯುವತಿ ಚಾಕುವಿನಿಂದ ತನ್ನ ಕತ್ತು ಸೀಳಿಕೊಂಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಮೌದಾಹ ಪಟ್ತಣದ ಸಮುದಾಯಭವನ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗಳಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
