ನವದೆಹಲಿ: ಯುವತಿ ಮದುವೆಗೆ ನಿರಾಕರಿಸಿದಳು ಎಂದು ಕಿರಾತಕನೊಬ್ಬ ಬುರ್ಖಾ ಧರಿಸಿ ಬಂದು ಆಕೆಯನ್ನು 5ನೇ ಮಹಡಿಯಿಂದ ತಳ್ಳಿ ಸಾಯಿಸಿರುವ ಘಟನೆ ನಡೆದಿದೆ.
ದೆಹಲಿಯ ಜ್ಯೋತಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನೇಹಾ ಮೃತ ಯುವತಿ. ತೌಫಿಕ್ ಎಂಬಾತ ಬುರ್ಖಾ ಧರಿಸಿ ಬಂದು ನೇಹಾಳ ಮನೆಗೆ ನುಗ್ಗಿದ್ದು, ಈ ವೇಳೆ ನೇಹಾಳ ತಂದೆ ಆತನನ್ನು ತಡೆಯಲು ಮುಂದಾಗುತ್ತಿದ್ದಂತೆ ಅವರನ್ನು ನೂಕಿ ನೇರವಾಗಿ ಟೆರೇಸ್ ಮೇಲೆ ಹೋಗಿದ್ದಾನೆ. ಅಲ್ಲಿ ನೇಹಾ ನೀರಿನ ಟ್ಯಾಂಕ್ ಪರಿಶೀಲಿಸುತ್ತಿದ್ದಳು. ಇಬ್ಬರ ನಡುವೆ ವಾಗ್ವಾದ, ಗಲಾಟೆಯಾಗಿದೆ.
ಈ ವೇಳೆ ತೌಫಿಕ್ ನೇಹಾಳನ್ನು ತಳ್ಳಿದ್ದು, ನೇಹಾ 5ನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು, ತಕ್ಷಣ ಆಕೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಉತ್ತರ ಪ್ರದೇಶದ ತೌಫಿಕ್ ದೆಹಲಿಯ ಮಾಂಡೋಲಿಯಲ್ಲಿ ಕೆಲಸ ಮಾಡುತ್ತಿದ್ದ. ತೌಫಿಕ್ ಹಾಗೂ ನೇಹಾ ಮೂರು ವರ್ಷಗಳಿಂದ ಪರಿಚಯದವರು. ನೇಹಾ ತೌಫಿಕ್ ನನ್ನು ಸಹೋದರನಂತೆ ಕಾಣುತ್ತಿದ್ದಳು. ಅಲ್ಲದೇ ರಾಖಿ ಹಬ್ಬದಲ್ಲಿ ರಾಖಿಯನ್ನು ಕಟ್ಟಿದ್ದಳು. ಆದರೆ ತೌಫಿಕ್, ಕೆಲದಿನಗಳಿಂದ ನೇಹಾಳಿಗೆ ತನ್ನನ್ನು ಮದುವೆಯಾಗುವಂತೆ ಹಿಂದೆ ಬಿದ್ದಿದ್ದ. ಇದಕ್ಕೆ ನೇಹಾ ಒಪ್ಪಿರಲಿಲ್ಲ. ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಳು. ಕಳೆದ ಒಂದು ತಿಂಗಳಿಂದ ತನ್ನನ್ನು ಮದುವೆಯಾಗಿವಂತೆ ಒತ್ತಡ ಹೇರುತ್ತಿದ್ದ. ಅಲ್ಲದೇ ಬೆದರಿಕೆಯನ್ನೂ ಹಾಕಿದ್ದ. ಒತ್ತಡಕ್ಕೂ ನೇಹಾ ಹೆದರದಿದ್ದಾಗ ನೇರವಾಗಿ ಆಕೆಯ ಮನೆಗೆ ಬಂದು ಐದನೇ ಮಹಡಿಯಿಂದ ತಳ್ಳಿ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಿಂದ ತೌಫಿಕ್ ನನ್ನು ಬಂಧಿಸಿದ್ದಾರೆ.