ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಕರಣದ ಹೊಣೆ ಹೊತ್ತು ಸಿಎಂ, ಡಿಸಿಎಂ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕಾರ್ಯಕ್ರಮದ ಬಗ್ಗೆ ಪೊಲೀಸರು ನಿರಾಕರಿಸದೂ ರಾಜಕೀಯ ಪ್ರಚಾರಕ್ಕಾಗಿ ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ವಿಧಾನಸೌಧಕ್ಕೆ ಕರೆತಂದು ಸನ್ಮಾನ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೆಡಿಯಂ ನಲ್ಲಿ ವಿಜಯೋತ್ಸವ ಆಯೋಜಿಸಿದ್ದಾರೆ. ಒಂದು ಲಕ್ಷ ಜನರು ಸೇರಿದ್ದನ್ನು ಇವರಿಗೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇಲ್ಲಿ ಜನ ಸಾಯುತ್ತಿದ್ದರೆ ಅಲ್ಲಿ ಕಪ್ ಕೊಡಲು ಹೋಗಿದ್ದಾರೆ. ಯಾವುದೇ ವ್ಯವಸ್ಥೆಯನ್ನೇ ಮಾಡದೇ ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ತಮ್ಮ ಪ್ರಚಾರಕ್ಕಾಗಿ, ವೋಟ್ ಬ್ಯಾಅಂಕ್ ಗಾಗಿ ಮಾಡಿ ಈಗ ದುರಂತಕ್ಕೆ ಕಾರಣರಾಗಿದ್ದಾರೆ ಎಂದು ಗುಡುಗಿದರು.
ಪುಷ್ಪಾ ಸಿನಿಮಾ ಥಿಯೇಟರ್ ನಲ್ಲಿ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಆಗ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಈಗ ಕಾಲ್ತುಳಿದಲ್ಲಿ ೧೧ ಜನರು ಸಾವನ್ನಪ್ಪಿದ್ದಾರೆ. ಈಗ ಯಾರ್ಯಾರನ್ನು ಬಂಧಿಸಬೇಕು? ಸಿಎಂ, ಡಿಸಿಎಂ ಸೇರಿ ಎಲ್ಲರನ್ನೂ ಅರೆಸ್ಟ್ ಮಾಡಲಿ. ಪ್ರಕರಣದ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಮೃತರ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ನೀಡಲಿ. ದುರಂತದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರೇ ವಿಧಾನಸಭೆಯನ್ನು ವಿಸರ್ಜಿಸಿ. ಯಾವುದೇ ಕಾರಣಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದುವರೆಯಬಾರದು ಎಂದು ಆಗ್ರಹಿಸಿದರು.